ಚೆನ್ನೈ: ತಮಿಳುನಾಡಿನಲ್ಲಿ ‘ಮಿಚಾಂಗ್’ ಚಂಡಮಾರುತದ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಧಾರಾಕಾರ ಮಳೆ, ಗಾಳಿಯಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮಳೆ ಪ್ರಮಾಣ ತುಸು ತಗ್ಗಿದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
ಇತ್ತ ಮುಖ್ಯಮಂತ್ರಿ ಸ್ಟಾಲಿನ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.
Chennai Airfield now open for all arrival and departure operations.#CycloneMichaung pic.twitter.com/sNSqBUz3S5
— ANI (@ANI) December 5, 2023
ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ.
ಚೆನ್ನೈ ವಿಮಾನನಿಲ್ದಾಣ ರನ್ವೇ ಜಲಾವೃತಗೊಂಡಿದ್ದರಿಂದ ಅಧಿಕಾರಿಗಳು 70 ವಿಮಾನಗಳ ಯಾನ ರದ್ದುಪಡಿಸಿದ್ದರು. ರೈಲು, ಬಸ್ಸುಗಳ ಸಂಚಾರವೂ ವಿಳಂಬ ಅಥವಾ ರದ್ದತಿ ಕಾರಣದಿಂದಾಗಿ ವ್ಯತ್ಯಯಗೊಂಡಿತ್ತು. ಕೊಯಮತ್ತೂರು, ಮೈಸೂರು ಕಡೆಗೆ ತೆರಳಬೇಕಿದ್ದ ರೈಲುಗಳ ಸಂಚಾರ ರದ್ದಾಗಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿತ್ತು. ಅಲ್ಲದೆ, ಚೆನ್ನೈನಲ್ಲಿ 14 ಸಬ್ವೇಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತವಾಗಿತ್ತು.
ರಜೆ ಘೋಷಣೆ: ತಮಿಳುನಾಡು ಸರ್ಕಾರ, ಚೆನ್ನೈ ಹಾಗೂ ತಿರುವಲ್ಲೂರು, ಕಾಂಚೀಪುರಂ, ಚೆಂಗಲಪಟ್ಟು ಜಿಲ್ಲೆಗಳಲ್ಲಿ ಇಂದು ರಜೆ ಘೋಷಿಸಿದೆ. ಅಗ್ನಿಶಾಮಕ ಸೇವೆ, ಆಸ್ಪತ್ರೆ, ಪೆಟ್ರೋಲ್ ಬಂಕ್, ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ.
#WATCH | Tamil Nadu | People use boats in West Tambaram CTO colony and Sasivaradhan Nagar area of Chennai as the city continues to face a flood-like situation. #CycloneMichaung pic.twitter.com/74sIaWjqXR
— ANI (@ANI) December 5, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.