ಭುವನೇಶ್ವರ/ ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಉಂಟಾಗಿರುವ ತೀವ್ರ ವಾಯುಭಾರ ಕುಸಿತದ ಪರಿಣಾಮ ಪ್ರಬಲ ‘ಮಿಧಿಲಿ’ ಚಂಡಮಾರುತ ರೂಪುಗೊಂಡಿದೆ. ಪ್ರತಿ ಗಂಟೆಗೆ 80 ಕಿ.ಮೀ ವೇಗವಾಗಿ ಚಲಿಸುತ್ತಿರುವ ಈ ಚಂಡಮಾರುತವು ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಿಗ್ಗೆ ಬಾಂಗ್ಲಾದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಇನ್ನೊಂದೆಡೆ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಿಜೋರಾಂ ರಾಜಧಾನಿ ಐಜ್ವಾಲ್ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗಿದೆ.
ಶನಿವಾರ ಕೂಡ ಮಿಜೋರಾಂನಲ್ಲಿ ಭಾರಿ ಮಳೆಯಾಗಲಿದೆ. ಅದರಲ್ಲೂ, ಚಂಫೈ, ಕೋಲಾಸಿಬ್, ಲಾಂಗ್ತಲೈ ಹಾಗೂ ಮಾಮಿಟ್ ಜಿಲ್ಲೆಗಳಲ್ಲಿ ಜೋರು ಮಳೆ ಬೀಳಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯ ಉತ್ತರ ಭಾಗ ಮತ್ತು ಪಶ್ಚಿಮ ಬಂಗಾಳದ ಕರಾವಳಿ ತೀರದ ಮೀನುಗಾರರು ಯಾವುದೇ ಕಾರಣಕ್ಕೂ ಶನಿವಾರದವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಐಎಂಡಿ ಎಚ್ಚರಿಕೆ ರೂಪದ ಸಂದೇಶ ನೀಡಿದೆ.
ಒಡಿಶಾದ ಕರಾವಳಿ ಭಾಗದಿಂದ 150 ಕಿ.ಮೀ ವೇಗದಲ್ಲಿ ಹಾದುಹೋಗುವ ಈ ಚಂಡಮಾರುತದಿಂದ ರಾಜ್ಯದ ಮೇಲೆ ಯಾವುದೇ ಗಂಭೀರ ಪರಿಣಾಮ ಆಗುವುದಿಲ್ಲ ಎಂದು ಐಎಂಡಿ ವಿಜ್ಞಾನಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.
ಮಾಲ್ಡೀವ್ಸ್, ಈ ಚಂಡಮಾರುತಕ್ಕೆ ಮಿಧಿಲಿ ಎಂದು ಹೆಸರಿಸಿದ್ದು, ಇದರ ಅರ್ಥ ದೊಡ್ಡ ಅಥವಾ ಬೃಹತ್ ಮರ ಎಂದಾಗುತ್ತದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಚಂಡಮಾರುತಗಳಿಂದ ಪರಿಣಾಮ ಎದುರಿಸುವ ರಾಷ್ಟ್ರಗಳು ಸರದಿ ಪ್ರಕಾರವಾಗಿ ಚಂಡಮಾರುತಗಳಿಗೆ ಹೆಸರು ನೀಡುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.