ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬಂಧಿಸಲಾಗಿದ್ದಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಬೆನ್ನು ಹಾಗೂ ಭುಜದ ಮೇಲೆ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಚ್ 3ರಂದು ನಡೆದ ಪ್ರತಿಭಟನೆಯ ವೇಳೆ ತಜಿಂದರ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ಗೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ತಜಿಂದರ್ ಮಾತನಾಡಿರುವ ಹೇಳಿಕೆ ಮತ್ತು ವಿಡಿಯೊ ಆಧರಿಸಿ ಪಂಜಾಬ್ ಪೊಲೀಸರು ಶುಕ್ರವಾರ ತಜಿಂದರ್ ಅವರನ್ನು ಬಂಧಿಸಿದ್ದರು.
ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಗ್ಗಾ, ಪಂಜಾಬ್ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಗನ ಬಂಧನದ ಹಿಂದೆ ಅರವಿಂದ್ ಕೇಜ್ರಿವಾಲ್ ಅವರ ಕೈವಾಡವಿದೆ ಎಂದು ತಜಿಂದರ್ ಬಗ್ಗಾ ಅವರ ಪೋಷಕರು ದೂರಿದ್ದರು.
ಘಟನೆಗೆ ಸಂಬಂಧಿಸಿ ತಜಿಂದರ್ ಬಗ್ಗಾ ಅವರ ತಂದೆ ಕೃಪಾಲ್ ಸಿಂಗ್ ದೆಹಲಿಯ ಜನಕಪುರಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಿದ್ದರು.
ಪಂಜಾಬ್ ಪೊಲೀಸರು ಹಾಗೂ ಬಗ್ಗಾ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಅಧರಿಸಿ ಇಂದು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವಯಂ ಸಿದ್ಧ ತ್ರಿಪಾಠಿ ಅವರು, ಬಗ್ಗಾ ಅವರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ವರದಿ ನೀಡುವಂತೆ ಜನಕಪುರಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.