ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ನಾಯಕನ ಬಂಧನದಿಂದಾಗಿ ಎಎಪಿ ಪಕ್ಷ ನೈತಿಕತೆ ಕಳೆದುಕೊಂಡಿದೆ ಎಂದು ದೆಹಲಿ ಬಿಜೆಪಿಯು ಪ್ರತಿಭಟನಾ ನಿರತ ಕಾರ್ಯಕರ್ತರನ್ನು ಕುಟುಕಿದೆ.
ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕೇಜ್ರಿವಾಲ್ ಅವರಿಗೆ ತಿಳಿದಿತ್ತು. ಹೀಗಾಗಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಪಕ್ಷದ ಸಂಸದ ಸಂಜಯ್ ಸಿಂಗ್ ಜೈಲಿಗೆ ಹೋಗಿದ್ದರು ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಹೇಳಿದ್ದಾರೆ.
‘ ಕೇಜ್ರಿವಾಲ್ ಅವರೇ ಸ್ವತಃ ಒಂಬತ್ತು ಬಾರಿ ಜಾರಿ ನಿರ್ದೇಶನಾಲಯದ ಸಮನ್ಸ್ಗಳನ್ನು ತಪ್ಪಿಸಿದ್ದಾರೆ. ಆದರೆ ಈಗ ಇ.ಡಿ ಅಧಿಕಾರಿಗಳಿಗೆ ಉತ್ತರಿಸಬೇಕಾಗಿದೆ. ಏಕೆಂದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಅದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ’ ಎಂದು ಸಚ್ದೇವ ಹೇಳಿದರು.
‘ಚೋರ್ ಮಚಾಯೆ ಶೋರ್’ (ಅಪರಾಧಿಯು ಅಪರಾಧವನ್ನು ಮುಚ್ಚಿಹಾಕಲು ಬಹಳಷ್ಟು ಶಬ್ದ ಮಾಡುತ್ತಾನೆ) ಎನ್ನುವ ಮಾತಿದೆ. ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯು ನಾಚಿಕೆಯಿಲ್ಲದೆ ಪ್ರತಿಭಟನೆ ನಡೆಸುತ್ತಿರುವುದು ಅದಕ್ಕೆ ಉದಾಹರಣೆಯಾಗಿದೆ ಎಂದರು.
ಆಮ್ ಆದ್ಮಿ ಪಕ್ಷ ಮತ್ತು ಅದರ ನಾಯಕರು ಕೇಜ್ರಿವಾಲ್ ಅವರ ಬಂಧನವಾಗಿದ್ದಕ್ಕೆ ಅಳುತ್ತಿದ್ದಾರೆ. ಪಕ್ಷವು ನೈತಿಕತೆ ಕಳೆದುಕೊಂಡಿದೆ. ಜತೆಗೆ ದೆಹಲಿಯ ಜನರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದರು.