ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಹೀನಾಯ ಸೋಲು ಕಂಡಿರುವ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಸರಣಿ ಪರಾಮರ್ಶೆ ಸಭೆ ನಡೆಸಿದೆ.
ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಅನಿಲ್ ಜೈನ್ ಮತ್ತು ದೆಹಲಿ ಘಟಕ ಸಂಘಟನಾ ಕಾರ್ಯದರ್ಶಿ ಸಿದ್ದಾರ್ಥನ್ ಅವರನ್ನು ಒಳಗೊಂಡ ಸರಣಿ ಸಭೆಗಳು ಶುಕ್ರವಾರ ನಡೆದಿವೆ.
ಶಾಹೀನ್ ಬಾಗ್ ವಿಚಾರವಾಗಿ ಬಿಜೆಪಿ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳು, ದ್ವೇಷಪೂರಿತ ಭಾಷಣಗಳೇ ದೆಹಲಿ ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿವೆ ಎಂದು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಗೋಲಿ ಮಾರೋ’ ಮತ್ತು ‘ಭಾರತ ವರ್ಸಸ್ಪಾಕಿಸ್ತಾನ'ದಂತಹ ಬಿಜೆಪಿ ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯುಂಟಾಗಿದೆ ಎಂದು ನಾಯಕರು ಪರಾಮರ್ಶೆ ಮಾಡಿಕೊಂಡಿದ್ದಾರೆ.
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದೆಹಲಿ ಚುನಾವಣಾ ಫಲಿತಾಂಶದ ವಿಚಾರವಾಗಿ ಇದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.