ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್ಎಸ್ ನಾಯಕಿ ಕೆ. ಕವಿತಾ ಮತ್ತು ನಾಲ್ವರನ್ನು ಆರೋಪಿಗಳೆಂದು ಉಲ್ಲೇಖಿಸಿ ಜಾರಿ ನಿರ್ದೇಶನಾಲಯವು ಹೊಸ ದೋಷಾರೋಪ ಪಟ್ಟಿ ಸಲ್ಲಿಸಿದೆ.
'ಸುಮಾರು 200 ಪುಟಗಳ ದೋಷಾರೋಪ ಪಟ್ಟಿಯನ್ನು ಇ.ಡಿಯು ರೋಸ್ ಅವೆನ್ಯೂ ಕೋರ್ಟ್ಗೆ ಸಲ್ಲಿಸಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗೋವಾದಲ್ಲಿ ಎಎಪಿ ಪರ ಪ್ರಚಾರ ನಡೆಸಿದ್ದ ಚಾರಿಯಟ್ ಪ್ರೊಡಕ್ಷನ್ಸ್ ಮೀಡಿಯಾ ಪ್ರೈ. ಲಿ. ಕಂಪನಿಯ ನೌಕರರಾದ ದಾಮೋದರ ಶರ್ಮ, ಪ್ರಿನ್ಸ್ ಕುಮಾರ್ ಮತ್ತು ಚಂಪ್ರಿತ್ ಸಿಂಗ್ ಹಾಗೂ ಇಂಡಿಯಾ ಅಹೆಡ್ ನ್ಯೂಸ್ ವಾಹಿನಿಯ ಮಾಜಿ ನೌಕರ ಅರವಿಂದ್ ಸಿಂಗ್ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣ ಸಂಬಂಧವಾಗಿ ಇ.ಡಿ ಸಲ್ಲಿಸಿದ 7ನೇ ದೋಷಾರೋಪ ಪಟ್ಟಿ ಇದಾಗಿದ್ದು, ಈವರೆಗೆ ಕೇಜ್ರಿವಾಲ್ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ.
ಮೇ 13ರಂದು ದೋಷಾರೋಪ ಪಟ್ಟಿಯ ಆಧಾರದ ಮೇಲೆ ವಿಚಾರಣೆ ನಡೆಯುವ ಸಾಧ್ಯತೆಗಳಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆಯೂ ಮುಂದಿನ ವಾರ ಇದೇ ರೀತಿಯ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ.
‘ದೆಹಲಿ ಅಬಕಾರಿ ನೀತಿಯಡಿಯಲ್ಲಿ ಮದ್ಯ ಮಾರಾಟದ ಪರವಾನಿಗೆ ನೀಡಲು ಎಎಪಿಗೆ ₹100 ಕೋಟಿ ಲಂಚ ನೀಡಿರುವ ಆರೋಪ ಹೊತ್ತಿರುವ ‘ಸೌತ್ ಗ್ರೂಪ್’ನಲ್ಲಿ ಕವಿತಾ ಪ್ರಮುಖ ವ್ಯಕ್ತಿಯಾಗಿದ್ದರು’ ಎಂದು ಇ.ಡಿ ಆರೋಪಿಸಿದೆ.
‘ಸೌತ್ ಗ್ರೂಪ್ ನೀಡಿರುವ ₹100 ಕೋಟಿ ಹಣದಲ್ಲಿ ₹40 ಕೋಟಿ ಹಣವನ್ನು ಎಎಪಿಯು 2022ರ ಗೋವಾ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡಿದೆ’ ಎಂದು ಇ.ಡಿ ಆರೋಪಿಸಿದೆ.
ಪ್ರಕರಣ ಸಂಬಂಧ ಬಂಧನದಲ್ಲಿರುವ ಕವಿತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇ.ಡಿ ಅಭಿಪ್ರಾಯವನ್ನು ಕೇಳಿದೆ.