ಶನಿವಾರ, ಪ್ರಗತಿ ಮೈದಾನ್ ಸುರಂಗ ರಸ್ತೆಯಲ್ಲಿ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಖದೀಮರು ಚಲಿಸುತ್ತಿದ್ದ ಕಾರನ್ನು ಗನ್ ತೋರಿಸಿ ಅಡ್ಡಗಟ್ಟಿದ್ದು, ಕಾರಿನಲ್ಲಿದ್ದ ಸುಮಾರು ₹2 ಲಕ್ಷ ಹಣವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಈ ದರೋಡೆಯ ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, 'ಲೆಫ್ಟಿನಂಟ್ ಗವರ್ನರ್ ಅವರು ಕೂಡಲೇ ರಾಜೀನಾಮೆ ನೀಡಬೇಕು. ದೆಹಲಿಯ ಜನರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ಬೇರೆಯವರಿಗೆ ಅವಕಾಶ ಮಾಡಿಕೊಡಿ. ದೆಹಲಿಯನ್ನು ಸುರಕ್ಷಿತವಾಗಿಡಲು ಕೇಂದ್ರ ಸರ್ಕಾರಕ್ಕೆ ಆಗದಿದ್ದರೆ, ನಮಗೆ ಅವಕಾಶ ನೀಡಿ. ನಗರವನ್ನು ಮತ್ತು ನಾಗರಿಕರನ್ನು ಹೇಗೆ ಸುರಕ್ಷಿತವಾಗಿ ಇರಿಸಬೇಕು ಎಂಬುದನ್ನು ನಾವು ನಿಮಗೆ ತೋರಿಸುತ್ತೇವೆ' ಎಂದು ತಿಳಿಸಿದ್ದಾರೆ.
ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ಅಧಿಕಾರವನ್ನು ಸ್ಥಳೀಯ ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಕೇಜ್ರಿವಾಲ್ ಪುನರುಚ್ಚರಿಸಿದ್ದಾರೆ.