ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಕಚ್ಚತೀವು ಬಿಟ್ಟು ಕೊಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಹೊರತಾಗಿಯೂ ಸಾರ್ವಜನಿಕವಾಗಿ ಡಿಎಂಕೆ ಪಕ್ಷ ಇದರ ವಿರೋಧ ಎಂಬಂತೆ ಬಿಂಬಿಸುತ್ತಿದೆ. ವಾಕ್ಚಾತುರ್ಯ ಹೊರತುಪಡಿಸಿದರೆ, ತಮಿಳುನಾಡಿನ ಹಿತಾಸಕ್ತಿಯನ್ನು ಕಾಪಾಡಲು ಡಿಎಂಕೆ ಪಕ್ಷ ಏನನ್ನೂ ಮಾಡಿಲ್ಲ’ ಎಂದು ಟೀಕಿಸಿದ್ದಾರೆ.
‘1974ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಭಾರತ ಮತ್ತು ಶ್ರೀಲಂಕಾ ನಡುವೆ ಕಚ್ಚತೀವು ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದ ಸಂಬಂಧ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಸಲ್ಲಿಸಿದ್ದ ಅರ್ಜಿಗೆ ಆರ್ಟಿಐ ನೀಡಿದ್ದ ಉತ್ತರವನ್ನು ಉಲ್ಲೇಖಿಸಿ’ ಮೋದಿ ಡಿಎಂಕೆ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
‘ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷವು ಕುಟುಂಬದ ಹಿತಾಸಕ್ತಿಗಳಿಗೆ ಒತ್ತು ನೀಡುತ್ತವೆ ವಿನಃ ದೇಶದ ಹಿತಾಸಕ್ತಿಗೆ ಅಲ್ಲ. ಕಾಂಗ್ರೆಸ್ 75 ವರ್ಷಗಳ ಆಡಳಿತದಲ್ಲಿ ದೇಶದ ಏಕತೆ, ಹಿತಾಸಕ್ತಿ, ಸಮಗ್ರತೆಯನ್ನು ದುರ್ಬಲಗೊಳಿಸಿದೆ’ ಎಂದು ಮೋದಿ ಟೀಕಾ ಪ್ರಹಾರ ನಡೆಸಿದ್ದಾರೆ.