ನವದೆಹಲಿ: ಪಶ್ಚಿಮ ಬಂಗಾಳಕ್ಕೆ ಪಡಿತರ ಅಕ್ಕಿ ಖರೀದಿಗೆ ಎಂದು ನೀಡಬೇಕಿದ್ದ ₹7000 ಕೋಟಿ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಡೆಹಿಡಿದಿದ್ದರೇ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
‘ಪಡಿತರ ಅಂಗಡಿಗಳ ಮುಂದೆ ಪ್ರಧಾನಿಯ ಫೋಟೊ ಪ್ರದರ್ಶಿಸುತ್ತಿಲ್ಲ ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪಶ್ಚಿಮ ಬಂಗಾಳಕ್ಕೆ ನೀಡಬೇಕಿದ್ದ ₹7000 ಕೋಟಿಯನ್ನು ತಡೆಹಿಡಿಯಲಾಗಿತ್ತು’ ಎಂದು ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರಾ ಅವರು ಇತ್ತೀಚೆಗೆ ‘ಜಗನ್ನಾಥ ದೇವರು ಮೋದಿ ಅವರ ಭಕ್ತ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ‘ಜಗನ್ನಾಥ ತನ್ನ ಭಕ್ತ ಎಂದು ಮೋದಿ ಅವರು ನಂಬಿರುವರೇ? ಎಂದು ಪ್ರಶ್ನಿಸಿದ್ದಾರೆ.
ತನ್ನ ಬಗೆಗಿನ ಪ್ರಚಾರ ಮತ್ತು ಭಾರತದ ಮಕ್ಕಳಿಗೆ ಲಸಿಕೆ ಇವುಗಳಲ್ಲಿ ಯಾವುದು ಮುಖ್ಯ ಎಂದು ಪ್ರಧಾನಿ ತಿಳಿಸುವರೇ ಎಂದು ಪ್ರಶ್ನಿಸಿದ್ದಾರೆ.
‘ಪಶ್ಚಿಮ ಬಂಗಾಳವನ್ನು ಯಾಕೆ ಅವಹೇಳನ ಮಾಡುತ್ತಿದ್ದೀರಿ, ರಾಜ್ಯಕ್ಕೆ ನೀಡಬೇಕಿರುವ ನರೇಗಾ ಅನುದಾನವನ್ನು ಮೂರು ವರ್ಷಗಳಿಂದ ಯಾಕೆ ತಡೆಹಿಡಿದಿದ್ದೀರಿ’ ಎಂದಿದ್ದಾರೆ.
‘ರೀಮಲ್ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಮೋದಿ ಅವರು ಸೂಕ್ಷ್ಮತೆ ತೋರದೆ ಯಾಕೆ ಚುನಾವಣೆಯ ಪ್ರಚಾರ ನಡೆಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.