ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲಾ ನ್ಯಾಯಾಲಯವು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಉಚ್ಛಾಟಿತ ನಾಯಕ ಶಹಜಹಾನ್ ಶೇಖ್ ಅವರನ್ನು ಏಪ್ರಿಲ್ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಕೋಲ್ಕತ್ತ ಹೈಕೋರ್ಟ್, ಶೇಖ್ ವಿರುದ್ಧದ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಿತ್ತು. ಅದರಂತೆ, ಶೇಖ್ ಅವರನ್ನು ಮಾರ್ಚ್ 6ರಿಂದ ವಶಕ್ಕೆ ಪಡೆದಿದ್ದ ಸಿಬಿಐ, ಬಸಿರ್ಹತ್ ನ್ಯಾಯಾಲಯದ ಎದುರು ಗುರುವಾರ ಹಾಜರುಪಡಿಸಿತ್ತು. ಈ ವೇಳೆ ಹೆಚ್ಚುವರಿ ಪ್ರಥಮ ದರ್ಜೆ ಮ್ಯಾಜಿಸ್ಟೇಟ್ ಅವರು, ಶೇಖ್ ಹಾಗೂ ಇತರ ಇಬ್ಬರು ಆರೋಪಿಗಳನ್ನು ಏಪ್ರಿಲ್ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಡಿತರ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರವಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶೇಖ್ ವಿರುದ್ಧ ತನಿಖೆಗೆ ಮುಂದಾಗಿತ್ತು. ಈ ಸಂಬಂಧ, ಸಂದೇಶ್ಖಾಲಿಯಲ್ಲಿರುವ ಶೇಖ್ ಅವರಿಗೆ ಸೇರಿದ ಸ್ಥಳಗಳಲ್ಲಿ ಕಾರ್ಯಾಚರಣೆಗೆ ಮುಂದಾದಾಗ, ಇ.ಡಿ ಅಧಿಕಾರಿಗಳ ಮೇಲೆ ಜನವರಿ 5ರಂದು ಹಲ್ಲೆ ನಡೆದಿತ್ತು.
ಹಗರಣ ಹಾಗೂ ಹಲ್ಲೆ ಪ್ರಕರಣದಿಂದಾಗಿ 55 ದಿನಗಳ ಕಾಲ ತಲೆ ಮರೆಸಿಕೊಂಡಿದ್ದ ಶೇಖ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸ್ ವಿಶೇಷ ಪಡೆಯು ಫೆಬ್ರುವರಿ 29ರಂದು ಬಂಧಿಸಿತ್ತು.
ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಸ್ಥಳೀಯರ ಭೂಮಿ ಕಬಳಿಸಿರುವ ಆರೋಪವೂ ಶೇಖ್ ಮೇಲಿದೆ.