ಕೋಲ್ಕತ್ತ: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಸುಮಾರು 150 ದಳಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗುವುದು. ಎಲ್ಲ ದಳಗಳು ಮಾರ್ಚ್ ಮೊದಲ ವಾರದಲ್ಲಿ ರಾಜ್ಯವನ್ನು ತಲುಪಲಿವೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
'ಕೇಂದ್ರೀಯ ಭದ್ರತಾ ಪಡೆಗಳ 100 ದಳಗಳು ಮೊದಲ ಹಂತದಲ್ಲಿ ಮಾರ್ಚ್ 1ರಂದು ರಾಜ್ಯಕ್ಕೆ ಬರಲಿವೆ. ಉಳಿದ 50 ದಳಗಳು ಮಾರ್ಚ್ 7ರೊಳಗೆ ತಲುಪಲಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಇನ್ನಷ್ಟು ದಳಗಳು ರಾಜ್ಯಕ್ಕೆ ಬರಲಿವೆ. ಮೊದಲ ಹಂತದಲ್ಲಿ ಡಾರ್ಜಿಲಿಂಗ್ಗೆ ಮೂರು ದಳಗಳನ್ನು ನಿಯೋಜಿಸಲಾಗುವುದು. ಎರಡನೇ ಹಂತದಲ್ಲಿ ಮತ್ತೆರಡು ದಳಗಳನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಎರಡು ಹಂತಗಳಲ್ಲಿ ಸಿಲಿಗುರಿ, ಕಲೀಂಪಾಂಗ್ ಜಿಲ್ಲೆಗಳಿಗೆ ತಲಾ ಎರಡು ದಳಗಳನ್ನು ನಿಯೋಜಿಸಲಾಗುವುದು. ಕೂಚ್ಬೆಹರ್ಗೆ ಐದು ಹಾಗೂ ಜಲ್ಪೈಗುರಿ, ರಾಯ್ಗಂಜ್ ಪೊಲೀಸ್, ದಕ್ಷಿಣ್ ದಿನಜ್ಪುರ್, ಬಂಕುರಾ, ಪುರುಲಿಯಾ, ಬಿರ್ಭುಮ್ ಜಿಲ್ಲೆಗಳಿಗೆ ತಲಾ ನಾಲ್ಕು ದಳಗಳನ್ನು ನಿಯೋಜಿಸಲಾಗುವುದು. ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಮಾಲ್ಡಾ ಮತ್ತು ಮುರ್ಷಿದಾಬಾದ್ ಜಿಲ್ಲೆಗಳು ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದವು. ಅದನ್ನು ಗಮನದಲ್ಲಿರಿಸಿ, ಮಾಲ್ಡಾಗೆ ಏಳು ಹಾಗೂ ಮುರ್ಷಿದಾಬಾದ್ಗೆ ಎಂಟು ದಳಗಳನ್ನು ನಿಯೋಜಿಸಲಾಗುವುದು. ಅಲಿಪುರದೌರ್ ಮತ್ತು ಇಸ್ಲಾಂಪುರ ಪೊಲೀಸ್ ಜಿಲ್ಲೆಗಳಿಗೆ ತಲಾ ಮೂರು ದಳಗಳನ್ನು ಕಳುಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖಂಡ ಶಹಜಹಾನ್ ಶೇಖ್ ಅವರ ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಹಾಗೂ ಭೂ ಕಬಳಿಕೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿಂಸಾಚಾರ, ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿರುವ ಸಂದೇಶ್ಖಾಲಿ ಪ್ರದೇಶ ಇರುವ ಬಸಿರ್ಹತ್ ಜಿಲ್ಲೆಗೆ ಈಗಾಗಲೇ 3 ದಳಗಳನ್ನು ನಿಯೋಜಿಸಲಾಗಿದೆ. ನದಿಯಾ ಜಿಲ್ಲೆಗೆ ಎಂಟು, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಿಗೆ ತಲಾ ಒಂಬತ್ತು ಹಾಗೂ ಕೋಲ್ಕತ್ತಕ್ಕೆ ಹತ್ತು ದಳಗಳನ್ನು ಕಾರ್ಯಗತಗೊಳಿಸಲಾಗುವುದು. ಉತ್ತರ 24 ಪರಗಣ ಜಿಲ್ಲೆಗೆ ಒಟ್ಟು 21 ದಳಗಳನ್ನು ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗೆ 9 ದಳಗಳನ್ನು ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದೂ ಅವರು ತಿಳಿಸಿದ್ದಾರೆ.