ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌ಗಳು ಬಿಜೆಪಿಯ ‘ವೈಟ್‌ ಕಾಲರ್‌ ಭ್ರಷ್ಟಾಚಾರ’: ಎಂ.ಕೆ.ಸ್ಟಾಲಿನ್‌

Published 17 ಮಾರ್ಚ್ 2024, 16:17 IST
Last Updated 17 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ಮುಂಬೈ: ಚುನಾವಣಾ ಬಾಂಡ್‌ಗಳನ್ನು ಆಡಳಿತಾರೂಢ ಬಿಜೆಪಿಯ ‘ವೈಟ್‌ ಕಾಲರ್‌ ಭ್ರಷ್ಟಾಚಾರ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಟೀಕಿಸಿದರು.

ಮುಂಬೈ ಶಿವಾಜಿ ಪಾರ್ಕ್‌ನಲ್ಲಿ ಭಾನುವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಕೇವಲ ಎರಡು ಕೆಲಸಗಳನ್ನು ಮಾತ್ರ ಮಾಡಿದ್ದಾರೆ. ಅವು, ವಿದೇಶ ಪ್ರವಾಸಗಳು ಮತ್ತು ನಕಲಿ ಪ್ರಚಾರ. ಅದನ್ನು ನಾವು ನಿಲ್ಲಿಸಬೇಕು’ ಎಂದು ಅವರು ಹೇಳಿದರು. 

ವಿರೋಧ ಪಕ್ಷಗಳು ತನ್ನ ಒಕ್ಕೂಟವನ್ನು ‘ಇಂಡಿಯಾ’ ಎಂದು ಹೆಸರಿಸಿದಾನಿಂದ ಬಿಜೆಪಿಯು ‘ಇಂಡಿಯಾ’ ಪದ ಬಳಸುವುದನ್ನೇ ನಿಲ್ಲಿಸಿದೆ ಎಂದು ಡಿಎಂಕೆ ಮುಖ್ಯಸ್ಥರ ದೂರಿದರು.

‘ಇದು ಅವರಲ್ಲಿನ ಭಯವನ್ನು ತೋರಿಸುತ್ತದೆ. ಪ್ರಧಾನಿ ಅವರು ನಮ್ಮನ್ನು ಭ್ರಷ್ಟರು ಎಂದು ಆರೋಪಿಸುತ್ತಿದ್ದಾರೆ, ಆದರೆ ಚುನಾವಣಾ ಬಾಂಡ್‌ಗಳು ಬಿಜೆಪಿಯನ್ನೇ ಭ್ರಷ್ಟ ಎಂಬುದನ್ನು ಸಾಬೀತು ಮಾಡಿವೆ. ಇದು ಬಿಜೆಪಿ ವೈಟ್‌ ಕಾಲರ್‌ ಭ್ರಷ್ಟಾಚಾರವಾಗಿದೆ’ ಎಂದು ಸ್ಟಾಲಿನ್‌ ಆರೋಪಿಸಿದರು.

‘ದೇಶಕ್ಕೆ ಬಿಜೆಪಿಗಿಂತ ದೊಡ್ಡ ಬೆದರಿಕೆ ಮತ್ತೊಂದಿಲ್ಲ, ನಾವು ಬಿಜೆಪಿಯನ್ನು ಸೋಲಿಸಬೇಕು’ ಎಂದರು. ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ‘ಇಂಡಿಯಾ’ ಒಕ್ಕೂಟವು ಜಾತ್ಯತೀತ, ಸಂಯುಕ್ತ ವ್ಯವಸ್ಥೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದರು. 

ದ್ವೇಷ ಸಿದ್ಧಾಂತದ ವಿರುದ್ಧ ಹೋರಾಟ: ತೇಜಸ್ವಿ

ಮುಂಬೈ (ಪಿಟಿಐ): ‘ಇಂಡಿಯಾ’ ಮೈತ್ರಿಕೂಟದ ಹೋರಾಟವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ವೈಯಕ್ತಿಕವಾದದ್ದಲ್ಲ ಬದಲಿಗೆ ದ್ವೇಷ ಸಿದ್ಧಾಂತದ ವಿರುದ್ಧವಾದದ್ದು ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಭಾನುವಾರ ತಿಳಿಸಿದರು.

ಶಿವಾಜಿ ಪಾರ್ಕ್‌ನಲ್ಲಿ ಮಾತನಾಡಿದ ಅವರು ದೇಶದ ವೈವೀಧ್ಯತೆ ಮತ್ತು ಸಹೋದರತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

‘ಮೋದಿ ಅವರು ಸುಳ್ಳಿನ ತಯಾರಕ ಸಗಟು ವ್ಯಾಪಾರಿ ಮತ್ತು ವಿತರಕ. ಅದರೆ ಅವರಿಗೆ ನಮ್ಮಂತಹ ಸತ್ಯವಂತರು ಹೆದರುವುದಿಲ್ಲ’ ಎಂದ ಅವರು ‘ಮಹಾರಾಷ್ಟ್ರ ಸರ್ಕಾರದಲ್ಲಿ ಇರುವವರು ವಿತರಕರೇ ಹೊರತು ನಾಯಕರಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT