ಶ್ರೀನಗರ: ನಿನ್ನೆ (ಸೆ.13ರಂದು) ಅನಂತ್ನಾಗ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಡಿಎಸ್ಪಿ ಹುಮಾಯುನ್ ಭಟ್ ಅವರಿಗೆ, ಅವರ ತಂದೆ ಜಮ್ಮು ಕಾಶ್ಮೀರದ ನಿವೃತ್ತ ಡಿಐಜಿ ಗುಲಾಮ್ ಹಸನ್ ಭಟ್ ಅವರು ಅಂತಿಮ ನಮನ ಸಲ್ಲಿಸಿರುವ ದೃಶ್ಯ ಮನಕಲಕುವಂತಿದೆ.
ವೀರ ಮರಣ ಹೊಂದಿದ ಮಗನ ಪಾರ್ಥಿವ ಶರೀರದ ಎದುರು ಭಾರವಾದ ಹೆಜ್ಜೆಗಳನ್ನಿಟ್ಟು ಬಂದು ಪುಷ್ಪಗುಚ್ಛವಿಟ್ಟಿದ್ದಾರೆ. ದೇಶಕ್ಕಾಗಿ ಮಡಿದ ಮಗನ ಮೃತದೇಹದೆದುರು ಒಬ್ಬ ಪೊಲೀಸ್ ಅಧಿಕಾರಿಗೆ ಇರುವ ಗಟ್ಟಿತನದೊಂದಿಗೆ ಒಂದು ಹನಿಯೂ ಕಣ್ಣಿರು ಸುರಿಸದೆ ನಮನ ಸಲ್ಲಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.