ನವದೆಹಲಿ : ‘ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಮುಕೇಶ್ ಸಿಂಗ್, ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದು, ಜ. 22ರಂದು ಅಪರಾಧಿಗಳನ್ನು ಗಲ್ಲಿಗೇರಿಸಬಾರದು’ ಎಂದು ಹೈಕೋರ್ಟ್ಗೆ ದೆಹಲಿ ಸರ್ಕಾರ ಬುಧವಾರ ತಿಳಿಸಿದೆ.
ಹೀಗಾಗಿ ಅಪರಾಧಿಗಳನ್ನು ನೇಣುಗಂಬಕ್ಕೇರಿಸುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ.
ನ್ಯಾಯಮೂರ್ತಿಗಳಾದ ಮನ ಮೋಹನ್ ಮತ್ತು ಸಂಗೀತಾ ಧಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ಪೀಠಕ್ಕೆ ಈ ಮಾಹಿತಿ ನೀಡಿರುವದೆಹಲಿ ಸರ್ಕಾರ, ‘ಅಪರಾಧಿ ಸಲ್ಲಿಸಿರುವ ದಯಾ ಅರ್ಜಿ ವಜಾಗೊಂಡ ನಂತರವೂ ಆತನನ್ನು ಗಲ್ಲಿಗೇರಿಸುವ ಮೊದಲು 14 ದಿನಗಳ ಕಾಲಾವಕಾಶದ ನೋಟಿಸ್ ನೀಡಬೇಕು’ ಎಂದು ಹೇಳಿದೆ.
ಈ ನಡುವೆ, ‘ಮುಕೇಶ್ಸಿಂಗ್ನ ಅರ್ಜಿಯನ್ನು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಕಳುಹಿಸಿದ್ದು, ಅರ್ಜಿಯನ್ನು ತಿರಸ್ಕರಿಸುವಂತೆ ಕೋರಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಅರ್ಜಿ ತಿರಸ್ಕರಿಸಿದ ದೆಹಲಿ ಕೋರ್ಟ್: ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾರಿಗೊಳಿಸಿರುವ ಡೆತ್ ವಾರಂಟ್ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದ್ದು, ಅಪರಾಧಿ ಮುಕೇಶ್ ಸಿಂಗ್ಗೆ ವಿಚಾರಣಾಧೀನ ಕೋರ್ಟ್ ಮೊರೆ ಹೋಗಲು ತಿಳಿಸಿದೆ.
ಖಂಡನೆ: ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವಲ್ಲಿ ದೆಹಲಿ ಸರ್ಕಾರ ವಿಳಂಬ ತಂತ್ರ ಅನುಸರಿಸುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಖಂಡಿಸಿದೆ.