ಮುಂಬೈ: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಿರಿಯ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆಷಿಶ್ ಶೇಲಾರ್ ಸಹಿತ ಎಂಟು ಮಂದಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸಂಪುಟದ ಸಚಿವರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ಮುಂಗಾರು ಅಧಿವೇಶನದ ಮುನ್ನಾ ದಿನ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಎಂಟು ಸಚಿವರ ಪೈಕಿ ಐವರು ಕಿರಿಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರ ಮೂರನೇ ಬಾರಿಗೆ ಸಂಪುಟ ವಿಸ್ತರಣೆ ಮಾಡಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ವಿಖೆ ಪಾಟೀಲ್ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಅವರು ಅಹ್ಮದ್ನಗರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ.
ಎನ್ಸಿಪಿ ತೊರೆದು ಶಿವಸೇನಾ ಸೇರಿರುವ ಜಯದತ್ತ್ ಕ್ಷೀರಸಾಗರ್, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಮುಖಂಡ ಅವಿನಾಶ್ ಮಹಾತೇಕರ್ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ.
ವಿಖೆ ಪಾಟೀಲ್, ಕ್ಷೀರಸಾಗರ್ ಮತ್ತು ಮಹಾತೇಕರ್ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಲ್ಲ. ಸದಸ್ಯರಾಗಿ ಆಯ್ಕೆಯಾಗಲು ಆರು ತಿಂಗಳ ಕಾಲಾವಕಾಶವಿದೆ. ಆದರೆ, ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರದ ಅವಧಿ ನಾಲ್ಕು ತಿಂಗಳಿಗೆ ಮುಗಿಯಲಿದೆ.
ವಸತಿ ಖಾತೆ ಸಚಿವ ಪ್ರಕಾಶ್ ಮೆಹ್ತಾ ಅಲ್ಲದೆ ರಾಜಕುಮಾರ್ ಬಡೋಲೆ, ವಿಷ್ಣು ಸಾರ್ವಾ, ದಿಲೀಪ್ ಕಾಂಬ್ಳೆ, ಪ್ರವೀಣ್ ಪೋತೆ ಮತ್ತು ಅಮರಿಷ್ ಅತ್ರಾಂ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಮುಖ್ಯಮಂತ್ರಿ ಅಂಗೀಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮಾನತೆಗಾಗಿ ವಿಸ್ತರಣೆ: ಪ್ರಾದೇಶಿಕ ಸಮಾನತೆ ಕಾಪಾಡಬೇಕು ಹಾಗೂ ಜನರ ಸೇವೆ ಮಾಡಲು ಮೈತ್ರಿಪಕ್ಷಗಳ ಶಾಸಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಂಪುಟ ವಿಸ್ತರಣೆ ಮಾಡಲಾಗಿದೆ. ಕಳಪೆ ಸಾಧನೆ ಕಾರಣವೊಡ್ಡಿ ಯಾವ ಸಚಿವರನ್ನೂ ಸಂಪುಟದಿಂದ ಕೈಬಿಟ್ಟಿಲ್ಲ ಎಂದು ಮುಖ್ಯಮಂತ್ರಿ ಫಡಣವೀಸ್ ಹೇಳಿದ್ದಾರೆ.