ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಸರ್ಕಾರದ ಪ್ರಸ್ತಾಪದ ಬಗ್ಗೆ ಮರುಪರಿಶೀಲನೆ ನಡೆಸಲು ಪಂಜಾಬ್ನ 32 ರೈತ ಸಂಘಗಳ ಮುಖಂಡರು ಸಿಂಘು ಗಡಿಯಲ್ಲಿ ಸಭೆ ಸೇರಿದ್ದಾರೆ.
ಕಾಯ್ದೆಗಳನ್ನು ಅಮಾನತಿನಲ್ಲಿಡುವ ಪ್ರಸ್ತಾಪಕ್ಕೆ ಸಮ್ಮತಿಸುವುದಾದರೆ ಶನಿವಾರದ ಒಳಗೆ ತಿಳಿಸುವಂತೆ ಸರ್ಕಾರವು ಶುಕ್ರವಾರ ರೈತ ಮುಖಂಡರಿಗೆ ತಿಳಿಸಿತ್ತು.
ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ, 40 ರೈತ ಒಕ್ಕೂಟಗಳ ನೇತೃತ್ವ ವಹಿಸಿರುವ ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದು (ಶನಿವಾರ) ನಡೆಯಲಿದೆ.
‘ಪಂಜಾಬ್ ರೈತ ಒಕ್ಕೂಟಗಳ ಸಭೆ ನಡೆಯುತ್ತಿದೆ. ‘ಸಂಯುಕ್ತ್ ಕಿಸಾನ್ ಮೋರ್ಚಾ’ದ ಸಭೆಯೂ ಇಂದೇ ನಡೆಯಲಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಪಂಜಾಬ್) ಉಪಾಧ್ಯಕ್ಷ ಲಖ್ಬೀರ್ ಸಿಂಗ್ ತಿಳಿಸಿದ್ದಾರೆ.
ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ಜತೆ ಶುಕ್ರವಾರ ನಡೆದಿದ್ದ 11ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿತ್ತು. ಎರಡೂ ಕಡೆಯವರು ಪಟ್ಟು ಸಡಿಲಿಸದ್ದರಿಂದ ಯಾವುದೇ ನಿರ್ಣಯಕ್ಕೆ ಬರುವುದು ಸಾಧ್ಯವಾಗಿರಲಿಲ್ಲ.
ಒಂದು ವೇಳೆ, ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷ ಅಮಾನತಿನಲ್ಲಿಡುವ ಪ್ರಸ್ತಾಪ ಸಮ್ಮತಿಸುವುದಾದರೆ ಶನಿವಾರ ತಿಳಿಸಬೇಕು. ಅದಾದ ಬಳಿಕವಷ್ಟೇ ಮಾತುಕತೆ ಮುಂದುವರಿಯಲು ಸಾಧ್ಯ ಎಂದು ಹೇಳಿತ್ತು.