ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ರೀತಿ ಗದ್ದಲವೆಬ್ಬಿಸಲು ಇದೇನು ಮೀನು ಮಾರುಕಟ್ಟೆಯಾ?: ಚಂದ್ರಬಾಬು ನಾಯ್ಡು ಗರಂ

Last Updated 19 ಜೂನ್ 2018, 17:22 IST
ಅಕ್ಷರ ಗಾತ್ರ

ಹೈದರಾಬಾದ್: ನೀವು ನನ್ನನ್ನು ಗೌರವಿಸಿದರೆ ನಾನೂ ನಿಮ್ಮ ನಿಮ್ಮನ್ನು ಗೌರವಿಸುತ್ತೇನೆ. ನೀವು ಈ ರೀತಿ ಆಟವಾಡಿದರೆ, ನಾನಿದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.ಎಲ್ಲದಕ್ಕೂ ಅದರದ್ದೇ ಆದ ವ್ಯವಸ್ಥೆ ಇದೆ. ನೀವು ಸರ್ಕಾರಕ್ಕೆ ಆಜ್ಞಾಪಿಸುವಂತಿಲ್ಲ.ನಾನು ನಿಮಗೆ ಗೌರವ ಕೊಡಲು ಬಯಸಿದರೆ ನೀವು ವಿಧಾನಸೌಧಕ್ಕೆ ಬಂದು ನಿಮ್ಮ ಮನಬಂದಂತೆ ವರ್ತಿಸುತ್ತಿದ್ದೀರಿ.ಇನ್ನೊಂದು ಬಾರಿ ಈ ರೀತಿ ಮಾಡಿದರೆ ನಿಮ್ಮ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ"- ಆಂಧ್ರ ಪ್ರದೇಶದಲ್ಲಿ ಮುಷ್ಕರ ನಿರತ ಕ್ಷೌರಿಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದಾಗ ಅದಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ ರೀತಿ ಇದು.

ಅಮರಾವತಿಯಲ್ಲಿರುವ ವಿಧಾನಸೌಧದ ಮುಂದೆ ಪ್ರತಿಭಟನಾ ನಿರತರ ಮೇಲೆ ವಾಗ್ದಾಳಿ ನಡೆಸುತ್ತಿರುವ ನಾಯ್ಡು ಅವರ ವಿಡಿಯೊ ಇದೀಗ ವೈರಲ್ ಆಗಿದೆ.

ರಾಜ್ಯದಾದ್ಯಂತವಿರುವ ದೇವಾಲಯದಲ್ಲಿ ಕ್ಷೌರಿಕ ವೃತ್ತಿ ಮಾಡುವವರು ತಮಗೆ ನಿರ್ದಿಷ್ಟ ವೇತನ ನಿಗದಿ ಮಾಡಬೇಕೆಂದು ಒತ್ತಾಯಿಸಿ ಮುಷ್ಕರ ನಿರತರಾಗಿದ್ದಾರೆ.

ಉಪ ಮುಖ್ಯಮಂತ್ರಿ ಕೆಇ ಕೃಷ್ಣ ಮೂರ್ತಿ, ನಯೀ ಬ್ರಾಹ್ಮಿಣ್ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ನಾಯ್ಡು ಈ ರೀತಿ ಮುಷ್ಕರ ನಿರತರ ಮೇಲೆ ಹರಿಹಾಯ್ದಿದ್ದಾರೆ,
ದೇವಾಲಯದಲ್ಲಿ ಕೆಲಸ ಮಾಡುವ ಸಾವಿರದಷ್ಟು ನೌಕರರು ತಮಗೆ ₹13,000 ವೇತನ ನಿಗದಿ ಮಾಡಬೇಕೆಂದು ಮತ್ತು ಪ್ರೊವಿಡೆಂಟ್ ಫಂಡ್ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ ಕ್ಷೌರಿಕ ಸಮುದಾಯದವರು ವಿಧಾನಸೌಧಕ್ಕೆ ಬಂದಿದ್ದು, ಮುಖ್ಯಮಂತ್ರಿಯ ಬೆಂಗಾವಲು ಪಡೆ ಬರುತ್ತಿದ್ದಂತೆ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ಇದನ್ನು ನೋಡಿಕಾರಿನಿಂದ ಇಳಿದ ನಾಯ್ಡು ಮುಷ್ಕರ ನಿರತರ ವಿರುದ್ಧ ಗರಂ ಆಗಿದ್ದಾರೆ. ಈ ವೇಳೆ ನಾಯ್ಡು ಅವರಿಗೆ ತಮ್ಮ ಉದ್ದೇಶವನ್ನು ಮನವರಿಕೆ ಮಾಡಲು ಕ್ಷೌರಿಕ ಸಂಘದ ಪ್ರತಿನಿಧಿಗಳು ಮುಂದಾಗಿದ್ದಾರೆ. ಆಗ ಮತ್ತಷ್ಚು ಕೋಪಗೊಂಡ ನಾಯ್ಡು, ನೀವೇನು ಹೇಳುತ್ತಿದ್ದೀರಾ? ನಿಮಗೆ ಮಾತನಾಡುವ ಅವಕಾಶವಿಲ್ಲ, ನೀವು ಯಾಕೆ ಈ ರೀತಿ ಗದ್ದಲವೆಬ್ಬಿಸುತ್ತಿದ್ದೀರಿ? ಇದೇನು ಮೀನು ಮಾರುಕಟ್ಟೆಯಾ? ಎಂದು ಗುಡುಗಿದ್ದಾರೆ.

ಪ್ರತಿಭಟನಾನಿರತರಲ್ಲಿ ಒಬ್ಬರು 'ಸರ್ ನೀವು ವಿಲೇಜ್ ರೆವೆನ್ಯೂ ಅಸಿಸ್ಟೆಂಟ್ ಮತ್ತು ಹೋಮ್ ಗಾರ್ಡ್ ಗಳಿಗೆ ವೇತನ ಹೆಚ್ಚಳ ಮಾಡಿದ್ದೀರಿ. ನಮಗೂ ವೇತನ ಹೆಚ್ಚಳ ಮಾಡಿ' ಎಂದು ಕೂಗಿದ್ದಾರೆ.
ಈ ಮಾತು ಕೇಳಿ ಕುಪಿತರಾದ ನಾಯ್ಡು, ಪ್ರತಿಭಟನಾಕಾರರತ್ತ ಬೆರಳು ತೋರಿಸಿ, ನೀವೇನು ಮಾಡಬೇಕೋ ಅದನ್ನು ಮಾಡಿ, ನಾನೇನೂ ಹೇಳಲಾರೆ. ನೀವು ಯಾರನ್ನು ಹೆದರಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.ನಾವು ಯಾರಿಗೂ ಬೆದರಿಕೆಯೊಡ್ಡುತ್ತಿಲ್ಲ ಎಂದು ಆ ವ್ಯಕ್ತಿ ಉತ್ತರಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ನಾಯ್ಡು, ನೀವು ಯಾವ ಗ್ರಾಮದಿಂದ ಬಂದಿದ್ದೀರಿ? ನಾನು 9 ವರ್ಷಗಳ ಕಾಲ ಆಡಳಿತ ನಡೆಸಿದ್ದೀನಿ, ಒಬ್ಬನೇ ಒಬ್ಬ ವ್ಯಕ್ತಿ ಪ್ರತಿಭಟನೆ ಮಾಡಿಲ್ಲ. ನೀವು ಕೇಳುವುದರಲ್ಲಿ ನ್ಯಾಯ ಇದ್ದರೆ ನಿಮ್ಮನ್ನು ಹುಡುಕಿಕೊಂಡು ಬರುವೆ. ಆದರೆ ಯಾರಾದರೂ ನನಗೆ ಬೆದರಿಕೆಯೊಡ್ಡಿದರೆ ನಾನು ಅವರ ಬಾಲ ಕತ್ತರಿಸುವೆ ಎಂದಿದ್ದಾರೆ.

ನಾಯ್ಡು ಕೋಪದಿಂದ ಗುಡುಗುತ್ತಿದ್ದಂತೆ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್‍ಗಳು ಪ್ರತಿಭಟನಾಕಾರರನ್ನು ಹಿಂದಕ್ಕೆ ತಳ್ಳಿ ಚದುರಿಸುವ ಯತ್ನ ಮಾಡಿದ್ದಾರೆ. ಆಗ ನಾಯ್ಡುಅವರನ್ನು ತಡೆಯಬೇಡಿ. ಅವರು ನಿರಾತಂಕವಾಗಿ ಮುಂದೆ ಬರಲಿ. ನಾನು ಅವರ ಜತೆ ಮಾತನಾಡುವೆ, ಅವರೇನು ಮಾಡುತ್ತಾರೆ ಎಂದು ನಾನೂ ನೋಡುತ್ತೇನೆ ಎಂದಿದ್ದಾರೆ.

ಆದಾಗ್ಯೂ, ಮುಖ್ಯಮಂತ್ರಿಯವರ ಈ ವರ್ತನೆ ಬಗ್ಗೆ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT