ಅಹಮದಾಬಾದ್: 2002ರ ನರೋದಾ ಗಾಮ್ ಗಲಭೆ ಪ್ರಕರಣದ ಎಲ್ಲ 67 ಜನ ಆರೋಪಿಗಳನ್ನು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.
ಎಸ್ಐಟಿ ಪ್ರಕರಣಗಳ ಕುರಿತ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಸ್.ಕೆ.ಬಕ್ಷಿ ತೀರ್ಪು ಪ್ರಕಟಿಸಿದರು.
ಬಿಜೆಪಿ ನಾಯಕಿ, ಮಾಜಿ ಸಚಿವೆ ಮಾಯಾ ಕೊಡ್ನಾನಿ, ವಿಶ್ವ ಹಿಂದೂ ಪರಿಷತ್ನ ಮಾಜಿ ಮುಖಂಡ ಜಯದೀಪ್ ಪಟೇಲ್, ಬಜರಂಗ ದಳ ಮಾಜಿ ಮುಖಂಡ ಬಾಬು ಬಜರಂಗಿ ಈ ಪ್ರಕರಣದ ಆರೋಪಿಗಳಾಗಿದ್ದರು.
ನರೋದಾ ಗಾಮ್ನಲ್ಲಿ ನಡೆದ ಗಲಭೆಯಲ್ಲಿ 11 ಮಂದಿ ಮುಸ್ಲಿಮರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಿತ್ತು.
ಈ ಪ್ರಕರಣದಲ್ಲಿ ಒಟ್ಟು 86 ಆರೋಪಿಗಳಿದ್ದರು. ಈ ಪೈಕಿ 18 ಮಂದಿ ವಿಚಾರಣೆ ನಡೆಯುತ್ತಿದ್ದ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಒಬ್ಬ ಆರೋಪಿಯನ್ನು ಕೋರ್ಟ್ ಈ ಮೊದಲೇ ಖುಲಾಸೆಗೊಳಿಸಿತ್ತು.