ಜಮ್ಮು:ಕಳೆದ ವಾರದ ಜಮ್ಮು ಮತ್ತು ಕಾಶ್ಮೀರದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿದ ತಮ್ಮ ಕ್ರಮದ ಕುರಿತು ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಬಹುದಾದ ಹೇಳಿಕೆ ನೀಡಿದ್ದಾರೆ.
‘ನಾನು ದೆಹಲಿ (ಕೇಂದ್ರ ಸರ್ಕಾರದ) ಸಲಹೆ ಪಡೆಯಲು ಮುಂದಾಗಿದ್ದರೆ, ಸಾಜದ್ ಲೋನ್ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ನೀಡಬೇಕಾಗುತ್ತಿತ್ತು. ಆಗ ಇತಿಹಾಸ ನನ್ನನ್ನು ಅಪ್ರಾಮಾಣಿಕ ವ್ಯಕ್ತಿ ಎಂದು ನೆನಪಿಟ್ಟುಕೊಳ್ಳುತ್ತಿತ್ತು. ಆದ್ದರಿಂದ ನಾನು ಈ ಕ್ರಮ ಕೈಗೊಂಡೆ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
‘ನಾನು ಮಾಡಿದ್ದು ಸೂಕ್ತವಾಗಿಯೇ ಇದೆ ಎಂದು ನನಗೆ ತಿಳಿದಿದೆ. ಈಗ ಯಾರು ಬೇಕಿದ್ದರೂ ನನ್ನನ್ನು ಬೈಯಬಹುದು’ ಎಂದು ಗ್ವಾಲಿಯರ್ನಲ್ಲಿ ಐಟಿಎಂ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಮಾತನಾಡುವ ವೇಳೆ ಅವರು ಹೇಳಿದ್ದಾರೆ.
‘ವಿಧಾನಸಭೆ ವಿಸರ್ಜನೆಯಾದ ನಂತರ ಸಂತಸ ವ್ಯಕ್ತಪಡಿಸಿದ್ದಎನ್ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ತಾವು ಬಯಸಿದ್ದು ಇದನ್ನೇ ಆಗಿತ್ತು ಎಂದು ಹೇಳಿದ್ದರು’ ಎಂದು ಮಲಿಕ್ ತಿಳಿಸಿದ್ದಾರೆ.