ಮುಂಬೈ: ‘ಖಾಲಿಸ್ತಾನ್ ಪ್ರತ್ಯೇಕತಾವಾದ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತಂತೆ ತನಿಖಾ ಸಂಸ್ಥೆಗಳಿಂದ ಬಲವಾದ ಯಾವುದೇ ಸಾಕ್ಷ್ಯ ನಮಗೆ ತಲುಪಿಲ್ಲ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೋಮವಾರ ತಿಳಿಸಿದರು.
ನಿಜ್ಜರ್ ಹತ್ಯೆ ಕುರಿತಂತೆ ಕೆನಡಾದ ಅಧಿಕಾರಿಗಳು 4ನೇ ಆರೋಪಿಯನ್ನು ಬಂಧಿಸಿದ್ದಾರೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣ ಕುರಿತಂತೆ ತನಿಖೆಗೆ ಭಾರತ ಮುಕ್ತವಾಗಿದೆ. ಆದರೆ, ದೇಶದಲ್ಲಿ ತನಿಖೆಗೆ ಅಗತ್ಯವಿರುವ ಆಧಾರವನ್ನು ಕೆನಡಾ ನೀಡಬೇಕು’ ಎಂದರು.
‘ಈ ಪ್ರಕರಣದ ಸಂಬಂಧ ಕಳೆದ ಕೆಲವು ದಿನಗಳಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂಬುದರ ಮಾಹಿತಿ ನನಗಿಲ್ಲ. ವಿದೇಶೀಯರ ಬಂಧನವಾದಾಗ, ಆ ರಾಷ್ಟ್ರ ಅಥವಾ ಆ ರಾಷ್ಟ್ರದ ರಾಯಭಾರಿಗೆ ವಿಷಯ ತಿಳಿಸುವುದು ಶಿಷ್ಟಾಚಾರ’ ಎಂದು ಜೈಶಂಕರ್ ಪ್ರತಿಕ್ರಿಯಿಸಿದರು.
45 ವರ್ಷದ ನಿಜ್ಜರ್ನನ್ನು ಬ್ರಿಟಿಷ್ ಕೊಲಂಬಿಯಾದ ಗುರುನಾನಕ್ ಸಿಖ್ ಗುರುದ್ವಾರದ ಬಳಿ ಜೂನ್ 18, 2023ರಂದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಕೆನಡಾದ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಈ ಪ್ರಕರಣವು ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.