ನವದೆಹಲಿ: ಸಂಸತ್ ಭವನದ ಭದ್ರತೆಗೆ ಸಂಬಂಧಿಸಿದಂತೆ ಬಹು ಆಯಾಮದಲ್ಲಿ ಪರಿಶೀಲನೆ ನಡೆಸುವ ಉದ್ದೇಶದಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ.
ಸಂಸತ್ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ (ಡಿ. 13) ಭಾರಿ ಭದ್ರತಾ ಲೋಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಭದ್ರತಾ ವೈಫಲ್ಯ ಕುರಿತು ಸಮೀಕ್ಷೆ ನಡೆಸಿ, ಅದು ಪುನರಾವರ್ತಿಸದಂತೆ ಕ್ರಿಯಾಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಬಿರ್ಲಾ ಹೇಳಿದ್ದಾರೆ.
ಈ ಕುರಿತಂತೆ ಸಂಸದರಿಗೆ ಸ್ಪೀಕರ್ ಪತ್ರ ಬರೆದಿದ್ದಾರೆ. ಕೇಂದ್ರ ಗೃಹ ಇಲಾಖೆ ಸ್ಥಾಪಿಸಲಿರುವ ತನಿಖಾ ಸಮಿತಿಯು ನೀಡುವ ವರದಿಯನ್ನು ಕೂಡಲೇ ಸದನಕ್ಕೂ ಸಲ್ಲಿಸಲಾಗುವುದು. ಈ ತನಿಖಾ ಸಮಿತಿಯ ಜತೆಗೆ, ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದೇನೆ. ಸಂಸತ್ ಭವನದಲ್ಲಿ ಇಂಥ ಕಹಿ ಘಟನೆಗಳು ಮುಂದೆ ಸಂಭವಿಸದಂತೆ ಎಚ್ಚರವಹಿಸಲು ಅಗತ್ಯವಿರುವ ಕ್ರಿಯಾ ಯೋಜನೆಯನ್ನು ಇದು ಸಿದ್ಧಪಡಿಸಲಿದೆ’ ಎಂದು ಬಿರ್ಲಾ ತಿಳಿಸಿದ್ದಾರೆ.