ನವದೆಹಲಿ: ಅಪರೇಷನ್ ಕಮಲದ ಮೂಲಕ ಹಿಮಾಚಲ ಪ್ರದೇಶದ ಜನರ ತೀರ್ಪನ್ನು ಬಿಜೆಪಿ ಕಸಿದುಕೊಳ್ಳಲಾಗದು ಎಂದಿರುವ ಕಾಂಗ್ರೆಸ್, ಪಕ್ಷದ ಹಿತದೃಷ್ಟಿಯಿಂದ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ನುಡಿದಿದೆ.
ಹಿಮಾಚಲ ಪ್ರದೇಶದ ಸರ್ಕಾರದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಇಲ್ಲಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭೂಪೇಶ್ ಬಘೇಲ್, ಭೂಪಿಂದರ್ ಸಿಂಗ್ ಹಾಗೂ ಡಿ.ಕೆ ಶಿವಕುಮಾರ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿದ್ದಾರೆ. ಅತೃಪ್ತರೂ ಸೇರಿ ಎಲ್ಲಾ ಶಾಸಕರೊಂದಿಗೆ ಮಾತುಕತೆ ನಡೆಸಿ ಶೀಘ್ರ ವರದಿ ನೀಡಬೇಕು ಎಂದು ರಾಜ್ಯದ ಎಐಸಿಸಿ ಉಸ್ತುವಾರಿ ರಾಜೀವ್ ಶುಕ್ಲಾ ಅವರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಒಂದು ಪಕ್ಷವಾಗಿ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಹಿಂಜರಿಯುವುದಿಲ್ಲ. ಹಿಮಾಚಲ ಪ್ರದೇಶದ ಜನಾದೇಶಕ್ಕೆ ಮೋಸ ಮಾಡಲು ಬಿಡುವುದಿಲ್ಲ. ಜನರಿಗೆ ಮಾತ್ರ ಅವರ ತೀರ್ಪನ್ನು ಹಿಂಪಡೆಯಲು ಅವಕಾಶ ಇರುವುದರಿಂದ, ಬಿಜೆಪಿ ಆಪರೇಶನ್ ಕಮಲಕ್ಕೆ ನಮ್ಮ ಜನಾದೇಶವನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ’ ಎಂದು ರಮೇಶ್ ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ, ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾದವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಪಕ್ಷವೇ ಸರ್ವೋಚ್ಛ. ಜನರ ತೀರ್ಪನ್ನು ಗೌರವಿಸಬೇಕು’ ಎಂದು ಹೇಳಿದ್ದಾರೆ.