ಡೆಹ್ರಾಡೂನ್: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಅರಣ್ಯ ಪ್ರದೇಶವನ್ನು ವ್ಯಾಪಿಸಿರುವ ಕಾಳ್ಗಿಚ್ಚು ನಂದಿಸಲು ರಾಜ್ಯ ಸರ್ಕಾರ ವಾಯುಪಡೆಯ ಹೆಲಿಕಾಪ್ಟರ್ ನೆರವು ಪಡೆದಿದೆ.
ಬೆಂಕಿಯು ಪೈನ್ಸ್ ವಲಯದ ಹೈಕೋರ್ಟ್ ಕಾಲೊನಿ ಪ್ರದೇಶವನ್ನೂ ವ್ಯಾಪಿಸಿದ್ದು, ಪರಿಸ್ಥಿತಿಯು ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಐ–17 ಹೆಲಿಕಾಪ್ಟರ್ ನೆರವಿನಿಂದ ಭೀಮ್ತಾಲ್ ಕೆರೆಯಿಂದ ನೀರು ಸಂಗ್ರಹಿಸಿ ಬೆಂಕಿ ವ್ಯಾಪಿಸಿರುವ ಪೈನ್ಸ್, ಭೂಮಿಯಾಧರ್, ನಾರಾಯಣ ನಗರ, ಭವಾಲಿ, ರಾಮಗಢ ಪ್ರದೇಶಗಳಲ್ಲಿ ಸಿಂಪಡಿಸಲಾಗುತ್ತಿದೆ.
ಕಾಳ್ಗಿಚ್ಚು ನಂದಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿಯೇ ಬೆಂಕಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
‘ಈಗಾಗಲೇ ವಾಯುಪಡೆ ಹೆಲಿಕಾಪ್ಟರ್ನ ಸೇವೆ ಪಡೆಯಲಾಗಿದೆ. ಬೆಂಕಿ ಹೊತ್ತಿಸಲು ಯತ್ನಿಸಿದ್ದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಲು ಶೀಘ್ರದಲ್ಲಿಯೇ ಅರಣ್ಯಾಧಿಕಾರಿಗಳ ಸಭೆಯನ್ನು ಕರೆಯಲಿದ್ದೇನೆ‘ ಎಂದು ಅವರು ತಿಳಿಸಿದರು.