ನವದೆಹಲಿ: ವೃತ್ತಿಪರ ಕೋರ್ಸ್ ಮತ್ತು ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲದ ಅಗತ್ಯವಿರುವವರಿಗೆ ಪಿಎಂ-ಕೇರ್ಸ್ ನೆರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
ಪಿಎಂ ಕೇರ್ಸ್ ಯೋಜನೆಯಡಿ ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಆರೋಗ್ಯ ಕಾರ್ಡ್ನ ಪಾಸ್ಬುಕ್ ಬಿಡುಗಡೆಯ ವಿಡಿಯೊ ಕಾನ್ಫರೆನ್ಸ್ನಲ್ಲಿ ಈ ಕುರಿತು ಪ್ರಧಾನಿ ಮಾತನಾಡಿದರು.
ಅಲ್ಲದೇ, ಮಕ್ಕಳಿಗೆ ಪ್ರತಿ ತಿಂಗಳು ₹4 ಸಾವಿರ ನೀಡಲಿದ್ದು, ಇದು ಅವರ ದೈನಂದಿನ ಅಗತ್ಯಗಳಿಗೆ ಸಹಾಯಕವಾಗಲಿದೆ’ ಎಂದು ಹೇಳಿದ್ದಾರೆ.
‘23 ವರ್ಷ ತುಂಬಿದ ನಂತರದವರಿಗೆ ₹10 ಲಕ್ಷದ ಜೊತೆಗೆ, ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ವಿಮೆ ಮತ್ತು ಮಾನಸಿಕ ಹಾಗೂ ಭಾವನಾತ್ಮಕ ಸಹಾಯಕ್ಕಾಗಿ ‘ಸಂವಾದ್ ಸಹಾಯವಾಣಿ’ ಕೌನ್ಸೆಲಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಕೋವಿಡ್ನಿಂದ ಅನಾಥರಾಗಿರುವ ಮಕ್ಕಳಿಗಾಗಿ ಪಿಎಂ ಕೇರ್ಸ್ ಸಹಾಯ ಮಾಡಲಿದೆ’ ಎಂದು ಹೇಳಿದರು.
‘ಪಿಎಂ ಕೇರ್ಸ್ ನಿಧಿಯಿಂದಾಗಿ ಕೊರೊನಾ ಅವಧಿಯಲ್ಲಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲು, ವೆಂಟಿಲೇಟರ್ ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಸಹಾಯಕವಾಯಿತು. ಇದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಯಿತು’ ಎಂದರು.
If someone needs education loan for professional courses, higher education, then PM CARES will help in that too: PM Modi
— Press Trust of India (@PTI_News) May 30, 2022
ದೇಶವು ವಿಷವರ್ತುಲದಿಂದ ಹೊರಬರುತ್ತಿದೆ...
‘2014ಕ್ಕೂ ಮುನ್ನ ಇದ್ದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಭಯೋತ್ಪಾದನಾ ಸಂಘಟನೆಗಳ ವ್ಯಾಪಕ ಹರಡುವಿಕೆ, ಪ್ರಾದೇಶಿಕ ತಾರತಮ್ಯದಂಥಹ ವಿಷವರ್ತುಲದಿಂದ ಇಂದು ದೇಶವು ಹೊರಬರುತ್ತಿದೆ. ನಮ್ಮ ಸರ್ಕಾರದ ಎಂಟು ವರ್ಷಗಳ ಅವಧಿಯನ್ನು ಬಡವರ ಕಲ್ಯಾಣಕ್ಕಾಗಿಯೇ ಮೀಸಲಿಡಲಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ನಮ್ಮ ಸರ್ಕಾರ 8 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ಆತ್ಮವಿಶ್ವಾಸ ಮತ್ತು ಆತ್ಮಸ್ಥೈರ್ಯವು ಅಭೂತಪೂರ್ವವಾಗಿದೆ. ಹೊಸ ಭರವಸೆ ಮತ್ತು ನಂಬಿಕೆಯಿಂದ ಜಗತ್ತು ನಮ್ಮತ್ತ ನೋಡುತ್ತಿದೆ’ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.
ಸ್ವಚ್ಛ ಭಾರತ್ ಮಿಷನ್, ಜನ್ ಧನ್ ಯೋಜನೆ, ಹರ್ ಘರ್ ಜಲ ಅಭಿಯಾನದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಮೋದಿ, ಸರ್ಕಾರವು ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ ಮತ್ತು ಎಲ್ಲರ ಪ್ರಯತ್ನದ ಸ್ಫೂರ್ತಿಯೊಂದಿಗೆ ಮುಂದೆ ಸಾಗುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.