ರಾಂಪುರ: ಮಾಟ, ಮಂತ್ರಕ್ಕೆ ಉಪಯೋಗಿಸುವ ಕೆಲವು ವಸ್ತುಗಳನ್ನು ನಮ್ಮ ಮನೆಯೊಳಗೆ ಎಸೆಯಲಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಪತ್ನಿ ತಜೀನ್ ಫಾತ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಟ್ಟೆ, ಮೊಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಯೊಳಗೆ ಎಸೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಜೀನ್ ಫಾತ್ಮಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಯ ಕುರಿತು ಫತ್ಮಾ ಪೊಲೀಸರಿಗೆ ಪತ್ರ ಬರೆದಿದ್ದು, ಇದು ಯಾವುದೋ ದೊಡ್ಡ ಪಿತೂರಿಯ ಭಾಗವಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮನೆಗೆ 24 ಗಂಟೆಗಳ ಕಾಲ ವೈ-ಕ್ಯಾಟಗರಿ ಭದ್ರತೆಯನ್ನು ಒದಗಿಸಿದಾದರೂ ಇಂತಹ ಘಟನೆ ಸಂಭವಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಖಾನ್ ಅವರ ನಿವಾಸದೊಳಗೆ ಕಪ್ಪು ಹಾಳೆಯಿಂದ ಸುತ್ತಿದ ಬಂಡಲ್, ಇತರ ಕೆಲವು ವಸ್ತುಗಳು ಇವೆ ಎಂಬುವುದನ್ನು ಗುರುವಾರ ತಡರಾತ್ರಿ ತಿಳಿಸಿದರು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಸಂಸಾರ್ ಸಿಂಗ್ ಹೇಳಿದ್ದಾರೆ.
ಅಜಂ ಖಾನ್ ರಾಂಪುರ ವಿಧಾನಸಭಾ ಕ್ಷೇತ್ರದಿಂದ 10 ಬಾರಿ ಶಾಸಕರಾಗಿದ್ದಾರೆ. ಈ ಹಿಂದೆ ದ್ವೇಷ ಭಾಷಣದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಶಿಕ್ಷೆ ವಿಧಿಸಿದ ನಂತರ ಅವರ ವಿಧಾನಸಭೆ ಸದಸ್ಯತ್ವ ಕೊನೆಗೊಂಡಿದೆ.