ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ವಿಶೇಷ | ದೇಶದಲ್ಲಿ ಏರುತ್ತಲೇ ಇದೆ ಪರಿಶಿಷ್ಟರ ಮೇಲಿನ ದೌರ್ಜನ್ಯ
ವಿಶೇಷ | ದೇಶದಲ್ಲಿ ಏರುತ್ತಲೇ ಇದೆ ಪರಿಶಿಷ್ಟರ ಮೇಲಿನ ದೌರ್ಜನ್ಯ
Published 9 ಜೂನ್ 2023, 0:56 IST
Last Updated 9 ಜೂನ್ 2023, 0:56 IST
ಅಕ್ಷರ ಗಾತ್ರ

ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಠಿಣ ಕಾನೂನುಗಳು ಇದ್ದರೂ, ಇಂತಹ ಪ್ರಕರಣಗಳಲ್ಲಿ ಗರಿಷ್ಠ ಮಟ್ಟದಲ್ಲಿ ಶಿಕ್ಷೆಯಾಗುತ್ತಿಲ್ಲ. ಈ ಕಾರಣದಿಂದಲೇ ಇಂತಹ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂಬುದರತ್ತ ಸರ್ಕಾರದ ದಾಖಲೆಗಳು ಬೊಟ್ಟು ಮಾಡುತ್ತವೆ.

ಪರಿಶಿಷ್ಟ ಜಾತಿಯ ಜನರ ವಿರುದ್ಧ ಅಸ್ಪೃಶ್ಯತೆ ಆಚರಣೆಯ ಎರಡು ಘಟನೆಗಳು ಈ ವಾರದಲ್ಲಿ ವರದಿಯಾಗಿವೆ. ಒಂದು ಗುಜರಾತ್‌ನಲ್ಲಿ ನಡೆದಿದ್ದರೆ, ಮತ್ತೊಂದು ಪಕ್ಕದ ತಮಿಳುನಾಡಿನಿಂದ ವರದಿಯಾಗಿದೆ.

ಈ ವಾರವಷ್ಟೇ ಗುಜರಾತ್‌ನ ಪಾಟಣ್‌ ಜಿಲ್ಲೆಯೊಂದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರ ಕೈಬೆರಳನ್ನು ಕ್ಷತ್ರಿಯ ಸಮುದಾಯಕ್ಕೆ ಸೇರಿದ ಯುವಕರು ಕತ್ತರಿಸಿದ್ದರು. ನಡೆದಿದ್ದದ್ದು ಇಷ್ಟೇ. ಕ್ಷತ್ರಿಯ ಸಮುದಾಯದ ಯುವಕರು ಕ್ರಿಕೆಟ್ ಆಡುತ್ತಿದ್ದಾಗ, ಪರಿಶಿಷ್ಟ ಜಾತಿಗೆ ಸೇರಿದ ಬಾಲಕನೊಬ್ಬ ಚೆಂಡನ್ನು ಮುಟ್ಟಿದ್ದ. ಆಗ ಯುವಕರು ಬಾಲಕನನ್ನು ಆತನ ಜಾತಿ ಹೆಸರಿನಲ್ಲಿ ನಿಂದಿಸಿದರು ಮತ್ತು ಚೆಂಡು ಮುಟ್ಟಬಾರದು ಎಂದು ತಾಕೀತು ಮಾಡಿದರು. ಇದಕ್ಕೆ ಆ ಬಾಲಕನ ಮಾವ ಆಕ್ಷೇಪ ವ್ಯಕ್ತಪಡಿಸಿದ. ಅದು ಜಗಳಕ್ಕೆ ಹೋಗಿ, ಕ್ಷತ್ರಿಯ ಸಮುದಾಯದ ಯುವಕರು ಆ ಬಾಲಕನ ಮಾವನ ಬೆರಳನ್ನು ಕತ್ತಿಯಿಂದ ಕತ್ತರಿಸಿದ್ದಾರೆ. 

ಇನ್ನು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ  ಶ್ರೀಧರ್ಮರಾಜ ದ್ರೌ‍ಪದಿ ಅಮ್ಮನ್‌ ದೇವಾಲಯಕ್ಕೆ ಪರಿಶಿಷ್ಟ ಜಾತಿಗೆ ಸೇರಿದವರು ಪ್ರವೇಶಿಸಬಾರದು ಎಂದು ಪ್ರಬಲ ಜಾತಿಯಾದ ವಣ್ಣಿಯಾರ್‌ ಸಮುದಾಯದವರು ತಾಕೀತು ಮಾಡಿದ್ದರು. ಇದು ಎರಡೂ ಸಮುದಾಯಗಳ ಮಧ್ಯೆ ವಾಗ್ವಾದ ಮತ್ತು ಸಂಘರ್ಷಕ್ಕೆ ಕಾರಣವಾಗಿತ್ತು. ಪರಿಶಿಷ್ಟ ಜಾತಿಯ ಜನರ ದೇವಾಲಯ ಪ್ರವೇಶಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳ ವತಿಯಿಂದ ನಡೆದ ಸಭೆಯೂ ವಿಫಲವಾಯಿತು. ಪರಿಶಿಷ್ಟ ಜಾತಿಯ ಜನರು ದೇವಾಲಯ ಪ್ರವೇಶಿಸಬಾರದು ಎಂದು ವಣ್ಣಿಯಾರ್‌ಗಳು ಪಟ್ಟು ಹಿಡಿದರು. ಕಡೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಯು ದೇವಾಲಯಕ್ಕೆ ಬೀಗ ಮುದ್ರೆ ಹಾಕಿತು.

ಎರಡೂ ಪ್ರಕರಣಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 2015ರಿಂದ 2021ರ ಮಧ್ಯೆ ದೇಶದಾದ್ಯಂತ ಈ ಕಾಯ್ದೆಯ ಅಡಿಯಲ್ಲಿ 3.64 ಲಕ್ಷ ಪ್ರಕರಣಗಳು ದಾಖಲಾಗಿದೆ. 2021ರ ಅಂತ್ಯದ ವೇಳೆಗೆ ವಿಚಾರಣೆಗೆ ನ್ಯಾಯಾಲಯದವರೆಗೆ ಬಂದ ಪ್ರಕರಣಗಳ ಸಂಖ್ಯೆ 3.07 ಲಕ್ಷ ಮಾತ್ರ. ಆದರೆ, ಇವುಗಳಲ್ಲಿ ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ 12,000ದಷ್ಟು ಮಾತ್ರ. 2021ರ ಡಿಸೆಂಬರ್ ಅಂತ್ಯದ ವೇಳೆಗೆ ವಿಚಾರಣೆ ಹಂತದಲ್ಲೇ ಇದ್ದ ಪ್ರಕರಣಗಳ ಸಂಖ್ಯೆ 2.95 ಲಕ್ಷ. 2022ರಲ್ಲಿ ಇಂತಹ ಎಷ್ಟು ಪ್ರಕರಣಗಳು ನಡೆದಿವೆ ಎಂಬುದರ ಮಾಹಿತಿಯನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ದೌರ್ಜನ್ಯ, ಜಾತಿ ನಿಂದನೆ, ಹಲ್ಲೆ, ತಾರತಮ್ಯ, ಅಸ್ಪೃಶ್ಯತೆ ಆಚರಣೆ ವಿರುದ್ಧ ದಾಖಲಾದ ಪ್ರಕರಣಗಳು ವಿಲೇವಾರಿ ಆಗುತ್ತಲೇ ಇಲ್ಲ. ಆದರೆ, ಈಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂಬುದನ್ನು ಈಗ ಲಭ್ಯವಿರುವ ಸರ್ಕಾರಿ ವರದಿಗಳು ಹೇಳುತ್ತವೆ.

ವರ್ಷ;ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳು

2015;44,946

2016;47,369

2017;50,328

2018;49,321

2019;53,531

2020;58,563

2021;60,045

ಆಧಾರ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ವರದಿಗಳು, ಪಿಟಿಐ

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT