ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

71ನೇ ಗಣರಾಜ್ಯೋತ್ಸವ| ಸಂಸ್ಕೃತಿ ವೈವಿಧ್ಯ, ರಕ್ಷಣಾ ಸಾಮರ್ಥ್ಯಕ್ಕೆ ಕನ್ನಡಿ

ಬ್ರೆಜಿಲ್‌ ಅಧ್ಯಕ್ಷ ಜೈರ್‌ ಮೆಸ್ಸಿಯಾಸ್‌ ಬೊಲ್‌ಸೊನಾರೊ ಮುಖ್ಯ ಅತಿಥಿ
Last Updated 26 ಜನವರಿ 2020, 19:43 IST
ಅಕ್ಷರ ಗಾತ್ರ

ನವದೆಹಲಿ: ಆಕರ್ಷಕ ಪಥಸಂಚಲನ, ವಿವಿಧ ರಾಜ್ಯಗಳ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯ ಬಿಂಬಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ, ರಕ್ಷಣಾ ಬಲಕ್ಕೆ ಕನ್ನಡಿ ಹಿಡಿದ ಆಧುನಿಕ ರಕ್ಷಣಾ ಸೌಲಭ್ಯಗಳ ಪ್ರದರ್ಶನ ಒಳಗೊಂಡು ಭಾನುವಾರ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಇಲ್ಲಿ ಆಚರಿಸಲಾಯಿತು.

ಬ್ರೆಜಿಲ್‌ ಅಧ್ಯಕ್ಷ ಜೈರ್‌ ಮೆಸ್ಸಿಯಾಸ್‌ ಬೊಲ್‌ಸೊನಾರೊ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು, ಸಂಭ್ರಮಕ್ಕೆ ಸಾಕ್ಷಿಯಾದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ವೀರಯೋಧರ ರಾಷ್ಟ್ರೀಯ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸಿ ನಮನ ಸಲ್ಲಿಸಿದರು.

ಬ್ರೆಜಿಲ್‌ ಅಧ್ಯಕ್ಷರು ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದು ಇದು ಮೂರನೇ ಬಾರಿ. ಇದರ ಜೊತೆಗೆ, ಈ ವರ್ಷದ ಗಣರಾಜ್ಯೋತ್ಸವದ ಮೆರವಣಿಗೆ ಅನೇಕ ಪ್ರಥಮಗಳಿಗೂ ವೇದಿಕೆಯಾಯಿತು.ಪ‍್ರಥಮ ಬಾರಿಗೆ ಸೇನೆಯ ಚಿನೂಕ್‌, ಅಪಾಚೆ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ಅತ್ಯಾಧುನಿಕ ಎ–ಸ್ಯಾಟ್‌ ಶಸ್ತ್ರಾಸ್ತ್ರ ಸೌಲಭ್ಯ ಪ್ರದರ್ಶಿಸಿದವು. ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು ಮತ್ತು ಕಾಶ್ಮೀರ ಮೊದಲ ಬಾರಿಗೆ ಭಾಗವಹಿಸಿತ್ತು. ರೂಪಿಸಿದ ‘ಮರಳಿ ಗ್ರಾಮಕ್ಕೆ’ ಸ್ತಬ್ಧಚಿತ್ರ ಪ್ರದರ್ಶಿಸಿತು.

22 ಸ್ತಬ್ಧಚಿತ್ರಗಳು: ಮೆರವಣಿಗೆಯಲ್ಲಿ 22 ಸ್ತಬ್ಧಚಿತ್ರಗಳಿದ್ದವು. 16 ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, 6 ಸಚಿವಾಲಯಗಳು, ರಾಷ್ಟ್ರೀಯ ವಿಪತ್ತು ಕಾರ್ಯಪಡೆ ಸ್ತಬ್ಧಚಿತ್ರಗಳಿದ್ದವು.

ಬಸವಣ್ಣ ಅವರ ‘ಅನುಭವ ಮಂಟಪ’ ಬಿಂಬಿಸುವ ಕರ್ನಾಟಕದ ಸ್ತಬ್ಧಚಿತ್ರ ಸೇರಿ ವಿಭಿನ್ನ ಸ್ಥಬ್ಧಚಿತ್ರಗಳು ಗಮನಸೆಳೆದವು.

ಸಾಂಸ್ಕೃತಿಕ ವೈವಿಧ್ಯವೇ ಬಲ –ಪ್ರಧಾನಿ

‘ಭಾರತದ ಸಾಂಸ್ಕೃತಿಕ ವೈವಿಧ್ಯವೇ ನಮ್ಮ ಬಲ. ವಿವಿಧ ಸಂಸ್ಕೃತಿಯ ಜನರು ಖುಷಿಯಾಗಿ ಒಟ್ಟಿಗೆ ಇರುವುದು ನಮ್ಮ ಹೆಮ್ಮೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

‘ಗಣರಾಜ್ಯೋತ್ಸವದ ಮೆರವಣಿಯಲ್ಲಿ ನಾವು ಇದರ ಕೆಲ ರೂಪಕಗಳನ್ನು ಕಾಣಬಹುದಾಗಿದೆ’ ಎಂದು ತಮ್ಮ ಟ್ವೀಟ್‌ ಸಂದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಥಸಂಚಲನದ ವಿಶೇಷಗಳು

lಭಾರತೀಯ ಸೇನೆಯು ರಫೇಲ್‌, ತೇಜಸ್‌ ಯುದ್ಧವಿಮಾನ, ಲಘು ಹೆಲಿಕಾಪ್ಟರ್, ಆಕಾಶ್‌ ಮತ್ತು ಆಸ್ಟ್ರಾ ಕ್ಷಿಪಣಿ ಸೌಲಭ್ಯ ಪ್ರದರ್ಶಿಸಿತು. ಸೇನೆಗೆ ಈಚೆಗೆ ಸೇರ್ಪಡೆಯಾಗಿದ್ದ ಚಿನೂಕ್‌, ಅಪಾಚೆ ಹೆಲಿಕಾಪ್ಟರ್‌ಗಳು ಮೊದಲ ಬಾರಿಗೆ ಭಾಗವಹಿಸಿದ್ದವು. ‘ಚಿನೂಕ್‌’ ಭಾರದ ವಸ್ತುಗಳ ಸಾಗಣೆಗೆ ಸೇನೆಗೆ ನೆರವಾಗಲಿದೆ. ಅಪಾಚೆ ಬಹುಪಯೋಗಿ ಹೆಲಿಕಾಪ್ಟರ್. ವಾಯುನೆಲೆಯಿಂದ ವಾಯುನೆಲೆ ಹಾಗೂ ಭೂನೆಲೆಗೆ ದಾಳಿ ನಡೆಸಲುಶಕ್ತ.

lಅಲ್ಲದೆ, ಅತ್ಯಾಧುನಿಕ ‘ಧನುಷ್’, ಎ–ಸ್ಯಾಟ್‌, ಡಿಆರ್‌ಡಿಒ ರೂಪಿಸಿರುವ ವಾಯು ರಕ್ಷಣೆ ನಿಯಂತ್ರಣ ರಾಡಾರ್ ಗಮನಸೆಳೆಯಿತು.

lಸೇನೆಯ ತನ್ನ ಪ್ರಬಲ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಮುಂಚೂಣಿಯಲ್ಲಿರುವ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳ ಸಾಲಿನಲ್ಲಿ ಭಾರತ ಸ್ಥಾನ ಪಡೆಯಿತು.

lಗಣರಾಜ್ಯೋತ್ಸವ ಆಚರಣೆಯ ಭಾಗವಾಗಿ ಜಾಲತಾಣ ವೇದಿಕೆಯಾದ ಗೂಗಲ್‌ ಕೂಡಾ ದೇಶದ ವೈವಿಧ್ಯ, ಸೌಹಾರ್ದವನ್ನು ಅಭಿವ್ಯಕ್ತಿಗೊಳಿಸುವ ಡೂಡಲ್‌ ಪ್ರದರ್ಶಿಸಿತು.

l‌ಪ್ರಧಾನಿ ಮೋದಿ ಕೇಸರಿ ಬಣ್ಣದ ರುಮಾಲು ‘ಬಂಧೇಜ್‌’, ಕುರ್ತಾ, ಜಾಕೆಟ್‌ ಧರಿಸಿ ಗಮನಸೆಳೆದರು. ವೀರಯೋಧರ ಸ್ಮಾರಕಕ್ಕೆ ನಮಿಸಿದರು.

l‌ಏರ್ ಇಂಡಿಯಾ ಗಣರಾಜ್ಯ ದಿನದ ನೆನಪಿನಲ್ಲಿ ಶ್ರೀನಗರದಲ್ಲಿ ತನ್ನ ಪ್ರಯಾಣಿಕರಿಗೆ ಪರಿಸರಸ್ನೇಹಿ, ಗುಡಿಕೈಗಾರಿಕೆಯಲ್ಲಿ ತಯಾರಾದ ಸುಮಾರು 30 ಸಾವಿರ ರಾಷ್ಟ್ರಧ್ವಜಗಳನ್ನು ವಿತರಿಸಿತು.

ಶ್ರೀನಗರ: ಕಾಣದ ಸಂಭ್ರಮ

ಶ್ರೀನಗರ: ವಿಶೇಷ ಅಧಿಕಾರವನ್ನು ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಮೊದಲ ಬಾರಿಗೆ ನಡೆದ ಗಣರಾಜ್ಯೋತ್ಸವದಲ್ಲಿ ಸಂಭ್ರಮ ಕಾಣಲಿಲ್ಲ.

ಇಲ್ಲಿನ ಶೇರ್‌–ಇ–ಕಾಶ್ಮೀರ ಕ್ರೀಡಾಂಗಣದಲ್ಲಿ 71ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು. ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆಗಾರ ಫಾರೂಕ್‌ ಖಾನ್‌ ಧ್ವಜಾರೋಹಣ ಮಾಡಿದರು. ಜಮ್ಮುವಿನ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದವು.

ಕಾಶ್ಮೀರದ 10 ಜಿಲ್ಲೆಗಳಲ್ಲಿ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ವಿಧಿಸಿದ್ದು, ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಲ್ಯಾಂಡ್‌ಲೈನ್‌ ಸಂಪರ್ಕ ಹೊರತು ಪಡಿಸಿ ಎಲ್ಲ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಮೊಬೈಲ್‌ಗಳ ಕರೆ ಹಾಗೂ ಇಂಟರ್‌ ನೆಟ್‌ ಸೇವೆಯನ್ನು ಮಧ್ಯಾಹ್ನ 3ರವರೆಗೆ ಸ್ಥಗಿತಗೊಳಿಸಲಾಗಿತ್ತು.

‘ಬಿಡುವು ಸಿಕ್ಕಾಗ ಸಂವಿಧಾನ ಓದಿ’

ಕಾಂಗ್ರೆಸ್‌ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಪ್ರತಿಯನ್ನು ಕೊಡುಗೆಯಾಗಿ ಕಳುಹಿಸಿದ್ದು, ‘ದೇಶವನ್ನು ವಿಭಜಿಸುವ ಕೆಲಸದ ನಡುವೆ ನಿಮಗೆ ಬಿಡುವು ದೊರೆತಾಗ ದಯವಿಟ್ಟು ಇದನ್ನು ಓದಿ’ ಎಂದು ಮನವಿ ಮಾಡಿದೆ.

ಈ ಕುರಿತ ಟ್ವೀಟ್‌ ಜೊತೆಗೆ ಪ್ರತಿ ಕಳುಹಿಸಿರುವ ಕುರಿತು ಅಮೆಜಾನ್‌ ಸ್ವೀಕೃತಿ ಪತ್ರವನ್ನು ಲಗತ್ತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT