ನವದೆಹಲಿ : ಕಾರವಾರದಿಂದ 398 ಕಿಲೋ ಮೀಟರ್ ದೂರದಲ್ಲಿ ಸಮುದ್ರ ಮಧ್ಯದಲ್ಲಿ, ಎಂಜಿನ್ ವೈಫಲ್ಯದಿಂದಾಗಿ ಅಪಾಯಕ್ಕಿಡಾಗಿದ್ದ ಮೀನುಗಾರರ ದೋಣಿಯೊಂದನ್ನು ಭಾರತೀಯ ಕರಾವಳಿ ಪಡೆಯು ಮಂಗಳವಾರ ರಕ್ಷಿಸಿದೆ.
‘ಮೀನುಗಾರರ ದೋಣಿ ರೋಸರಿಯಿಂದ ಏಪ್ರಿಲ್ 13ರಂದು ಕರೆ ಬಂದ ಹಿನ್ನೆಲೆ ಕರಾವಳಿ ಪಡೆಯ ಸಾವಿತ್ರಿಬಾಯಿ ಪುಲೆ ಹಡಗು ತಕ್ಷಣ ಸ್ಪಂದಿಸಿ ಕಾರ್ಯಾಚರಣೆ ನಡೆಸಿತು’ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.
‘ಕರಾವಳಿ ಪಡೆಯು ದೋಣಿಯ ಎಂಜಿನ್ ಅನ್ನು ಸರಿಪಡಿಸಲು ಯತ್ನಿಸಿ ಬಳಿಕ ಕರಾವಳಿ ಪಡೆಯ ಜಿಲ್ಲಾ ಘಟಕ ಮತ್ತು ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಕಾರವಾರ ಕರಾವಳಿ ತೀರಕ್ಕೆ ದೋಣಿಯನ್ನು ಎಳೆದುತಂದಿತು’ ಎಂದು ತಿಳಿಸಿದ್ದಾರೆ.