ನವದೆಹಲಿ: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಇಂದು ಭೇಟಿಯಾಗಿದ್ದಾರೆ.
ಭೂಹಗರಣ ಪ್ರಕರಣದಲ್ಲಿ ಎರಡು ತಿಂಗಳ ಹಿಂದೆ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿತ್ತು. ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಾರ್ಚ್ 21ರಂದು ಅರವಿಂದ ಕೇಜ್ರಿವಾಲ್ ಅವರನ್ನು ವಶಕ್ಕೆ ಪಡೆದಿತ್ತು.
ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಲ್ಪನಾ ಸೊರೇನ್, ಎರಡು ತಿಂಗಳ ಹಿಂದೆ ಜಾರ್ಖಂಡ್ನಲ್ಲಿ ನಡೆದಿದ್ದ ಘಟನೆ ಈಗ ದೆಹಲಿಯಲ್ಲಿ ನಡೆದಿದೆ. ನನ್ನ ಪತಿ ಹೇಮಂತ್ ಸೊರೇನ್ ಅವರಂತೆಯೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಜೈಲಿಗೆ ಕಳುಹಿಸಲಾಗಿದೆ. ಇಂದು ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಸಮಾಧಾನ ಹೇಳಿದ್ದೇನೆ. ಈ ಕುತಂತ್ರದ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ’ ಎಂದರು.
‘ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೂಡ ಇಂದು ಭೇಟಿ ಮಾಡಿ ಜಾರ್ಖಂಡ್ನ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದೇನೆ. ನಾಳೆ ರಾಮಲೀಲಾ ಮೈದಾನದಲ್ಲಿ ನಡೆಯುವ ಇಂಡಿಯಾ ಮೈತ್ರಿಕೂಟದ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು.
ಸುನೀತಾ–ಕಲ್ಪನಾ ಅವರ ಭೇಟಿಯ ವಿಡಿಯೊವನ್ನು ಹಂಚಿಕೊಂಡಿರುವ ಎಎಪಿ ಸಚಿವೆ ಅತಿಶಿ, ‘ಯಾವ ಬೆದರಿಕೆಗೂ ಜಗ್ಗದ ಈ ಇಬ್ಬರು ಬಲಿಷ್ಠ ಮಹಿಳೆಯರನ್ನು ಕಂಡು ಬಿಜೆಪಿ ಹೆದರಲೇಬೇಕು’ ಎಂದಿದ್ದಾರೆ.