‘ತಂತ್ರಜ್ಞಾನವು ಎಷ್ಟೇ ಮುಂದುವರಿಯಲಿ, ಮನುಷ್ಯನ ವಾಕ್ ಸ್ವಾತಂತ್ರ್ಯವನ್ನು ಕಸಿಯುವುದು ಸಾಧ್ಯವಾಗುವುದಿಲ್ಲ. ಅಭಿವ್ಯಕ್ತಿಯನ್ನು ಹತ್ತಿಕ್ಕುವ ಕಂಸನು ಸೃಷ್ಟಿಯಾದರೆ, ಅದನ್ನು ರಕ್ಷಿಸುವ ಕೃಷ್ಣನು ಹುಟ್ಟಿಬರುತ್ತಾನೆ’ ಎಂಬ ಸದಾಶಯದೊಂದಿಗೆ ಉದ್ಯಮಿ ಮೋಹಿತ್ ಸತ್ಯಾನಂದ ಚರ್ಚೆಗೆ ಚಾಲನೆ ನೀಡಿದರು. ಹಿರಿಯ ವಕೀಲೆ ಪಿಂಕಿ ಆನಂದ್, ‘ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವವರನ್ನು ನಿಗ್ರಹಿಸಲು ತಂತ್ರಜ್ಞಾನ ಬಳಕೆಯಾಗುತ್ತಿದೆ’ ಎನ್ನುತ್ತ, ನಿರ್ಭಯಾ ಪ್ರಕರಣ, ಸಂಸತ್ತಿನ ಮೇಲೆ ನಡೆದ ಆಕ್ರಮಣದ ಉದಾಹರಣೆ ನೀಡಿದರು. ‘ಆದರೆ, ತಂತ್ರಜ್ಞಾನ ಬಳಸಿ ಕಳ್ಳರನ್ನು ಹಿಡಿಯಬೇಕೇ ಹೊರತು ಜನಸಾಮಾನ್ಯರ ಮೇಲೆ ನಿಷೇಧಗಳನ್ನು ಹೇರುವುದು ಎಷ್ಟು ಸರಿ’ ಎಂದು ಲೇಖಕ ಪವನ್.ಕೆ. ವರ್ಮಾ ಪ್ರಶ್ನಿಸಿದರು.