ಜಮ್ಮು: ಜಮ್ಮು ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಬಸ್ ಅಪಘಾತದಲ್ಲಿ 22 ಜನರು ಮೃತಪಟ್ಟು, 64 ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಸಾರಿಗೆ ಇಲಾಖೆಯ ಆರು ಅಧಿಕಾರಿಗಳನ್ನು ಕರ್ತವ್ಯಲೋಪದಡಿ ಶುಕ್ರವಾರ ಅಮಾನತುಗೊಳಿಸಲಾಗಿದೆ.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಚಂದ್ರಾಕರ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಸಾರಿಗೆ ಇಲಾಖೆಯ ಕಾರ್ಯದರ್ಶಿ ನೀರಜ್ ಕುಮಾರ್ ಅವರು, ಕರ್ತವ್ಯಲೋಪದ ಆರೋಪದಡಿ ಕಠುವಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.
ರಂಜೀವ್ ಭಾಸಿನ್ (ಮೋಟರ್ ವಾಹನ ಇನ್ಸ್ಪೆಕ್ಟರ್), ಸುಮಿತ್ ಮಾಗೋತ್ರಾ (ಕಿರಿಯ ಸಹಾಯಕ) ಹಾಗೂ ಬಹುಕಾರ್ಯ ವಿಭಾಗದ ಸಿಬ್ಬಂದಿ (ಎಂಟಿಎಸ್) ಅಶ್ವನಿ ಕುಮಾರ್, ಅಮನ್ ಕುಮಾರ್, ಕೇಶವ್ ಸಿಂಗ್ ಮತ್ತು ರಾಕೇಶ್ ಕುಮಾರ್ ಅಮಾನತುಗೊಂಡವರು.
ಜಮ್ಮು ಜಿಲ್ಲಾ ಮ್ಯಾಜಿಸ್ಟ್ರೇಟ್ ಈಗಾಗಲೇ ಈ ಅಪಘಾತದ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆ ಆರಂಭಿಸಿದ್ದಾರೆ.
ಹರಿಯಾಣದ ಕುರುಕ್ಷೇತ್ರದಿಂದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇಗುಲಕ್ಕೆ ಗುರುವಾರ 86 ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿ ಜಮ್ಮು–ಪೂಂಛ್ ಹೆದ್ದಾರಿಯಿಂದ 150 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿತ್ತು.