ಜಮ್ಮು: ಭಯೋತ್ಪಾದನೆ ನೆರವು ಪ್ರಕರಣ ಸಂಬಂಧ ಎನ್ಐಎ ಬಂಧಿಸಿ, ಆರೋಪಪಟ್ಟಿಯನ್ನು ದಾಖಲಿಸಿದ್ದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಗುರುವಾರ ಸೇವೆಯಿಂದ ವಜಾ ಮಾಡಿದೆ.
ಸಿಂಗ್ ಅವರನ್ನು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ನ ಉಗ್ರರು ಕಾಶ್ಮೀರದಿಂದ ಜಮ್ಮುವಿಗೆ ಬರಲು ನೆರವಾಗಿದ್ದರು ಎಂಬುದಕ್ಕೆ ಸಂಬಂಧಿಸಿ ಕಳೆದ ವರ್ಷದ ಜನವರಿಯಲ್ಲಿ ಬಂಧಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಕರಣ ತನಿಖೆ ಕೈಗೊಂಡಿತ್ತು.
ತಕ್ಷಣದಿಂದ ಜಾರಿಗೆ ಬರುವಂತೆ ಸಂವಿಧಾನದ ವಿಧಿ 311ರ ಅನುಸಾರ ಸೇವೆಯಿಂದ ವಜಾ ಮಾಡಲಾಗಿದೆ ಎಂದು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಇದರ ಆಧಾರದಲ್ಲಿ ಜಮ್ಮುವಿನ ಸಾಮಾನ್ಯ ಆಡಳಿತ ವಿಭಾಗವು ವಜಾ ಆದೇಶವನ್ನು ನೀಡಿದೆ.