ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಸಭೆಗೂ ಮುನ್ನವೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯ ಅಶೋಕ ಹೋಟೆಲ್ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮೈತ್ರಿಕೂಟದ ಸಭೆ ಆಯೋಜಿಸಲಾಗಿದೆ. ಬಿಜೆಪಿ ವಿರುದ್ಧ ಕಾರ್ಯತಂತ್ರಗಳನ್ನು ರೂಪಿಸುವುದು, ಸೀಟು ಹಂಚಿಕೆ, ಜಂಟಿಯಾಗಿ ರ್ಯಾಲಿಗಳನ್ನು ನಡೆಸುವ ಕುರಿತು ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ವರದಿಯಾಗಲಿದೆ.
ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ(ಯುಟಿಬಿ) ಮುಖಂಡ ಉದ್ಧವ್ ಠಾಕ್ರೆ ಅವರನ್ನು ಕೇಜ್ರಿವಾಲ್ ಭೇಟಿಯಾಗಿದ್ದರು.
10 ದಿನಗಳ ಕಾಲ ವಿಪಶ್ಶನ ಕೇಂದ್ರಕ್ಕೆ ಕೇಜ್ರಿವಾಲ್: ಛಡ್ಡಾ
ಮೈತ್ರಿಕೂಟ ಸಭೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ಸಂಸದ ರಾಘವ್ ಛಡ್ಡಾ, ‘ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ. ಇದರೊಂದಿಗೆ ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ಕುರಿತೂ ಚರ್ಚಿಸಲಾಗುತ್ತದೆ’ ಎಂದರು.
ಕೇಜ್ರಿವಾಲ್ ಅವರಿಗೆ ಇ.ಡಿ ಸಮನ್ಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಂದಿನಿಂದ 10 ದಿನಗಳ ಕಾಲ ವಿಪಶ್ಶನ ಧ್ಯಾನ ಕೇಂದ್ರಕ್ಕೆ ಕೇಜ್ರಿವಾಲ್ ತೆರಳಲಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಇದನ್ನು ಮೊದಲೇ ನಿಗದಿಪಡಿಸಲಾಗಿದೆ. ಆದ್ದರಿಂದ ಕಾನೂನು ತಂಡ ಸಮನ್ಸ್ಗೆ ಉತ್ತರಿಸಲಿದೆ’ ಎಂದರು.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 21ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ಗೆ ಇ.ಡಿ ಸಮನ್ಸ್ ನೀಡಿತ್ತು.