ಕೊಲ್ಲಂ, ಕೇರಳ: ದಕ್ಷಿಣ ಕೇರಳದ ಕುರೀಪ್ಪುಳದಲ್ಲಿರುವ ಸೇಂಟ್ ಜೋಸೆಫ್ ಕಾನ್ವೆಂಟ್ನ ಬಾವಿಯೊಳಗೆ 42 ವರ್ಷದ ಕ್ಯಾಥೊಲಿಕ್ ಪಂಗಡಕ್ಕೆ ಸೇರಿದ ಕ್ರೈಸ್ತ ಸನ್ಯಾಸಿನಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರುಣಗಪ್ಪಳ್ಳಿ ಮೂಲದ ಮಾಬಲ್ ಜೋಸೆಫ್ (42) ಶವವಾಗಿ ಪತ್ತೆಯಾದ ಸನ್ಯಾಸಿನಿ.
ಸಾಮಾನ್ಯವಾಗಿ ಬೆಳಗಿನ ವೇಳೆ ಮಾಬಲ್ ಅವರು ಪಾರ್ಥನೆಗೆ ತೆರಳುತ್ತಿದ್ದರು. ಶುಕ್ರವಾರ ಮುಂಜಾನೆ ಅವರು ಕಾಣದಿದ್ದಾಗ ಸ್ನೇಹಿತೆಯರು ಮಾಬಲ್ ಅವರಿಗಾಗಿ ಹುಡುಕಾಟ ನಡೆಸಿದರು. ಕೊನೆಗೆ ಕಾನ್ವೆಂಟ್ನ ಆವರಣದಲ್ಲಿರುವ ಬಾವಿಯೊಳಗೆ ಮಾಬಲ್ ಶವವಾಗಿ ಪತ್ತೆಯಾಗಿದ್ದಾರೆ.
ಘಟನೆ ಕುರಿತು ಪರಿಶೀಲನೆ ನಡೆಸಿದ ಪೊಲೀಸರು ಇದು ಆತ್ಮಹತ್ಯೆ ಪ್ರಕರಣವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಆತ್ಮಹತ್ಯೆಗೆ ಮುನ್ನ ಮೃತ ಸನ್ಯಾಸಿನಿ ಬರೆದಿಟ್ಟಿದ್ದರು ಎನ್ನಲಾದ ಡೆತ್ನೋಟ್ ಅನ್ನು ಆಕೆಯ ಕೋಣೆಯಿಂದ ವಶಪಡಿಸಿಕೊಳ್ಳಲಾಗಿದೆ. ಆ ಪತ್ರದಲ್ಲಿ ತನ್ನ ಸಾವಿಗೆ ಯಾರೂ ಕಾರಣರಲ್ಲ, ಅನಾರೋಗ್ಯದ ಸಮಸ್ಯೆಯಿಂದ ಜೀವ ಕಳೆದುಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.