ಪಟ್ನಾ: ತಮ್ಮ ವಿರುದ್ಧ ಸುಳ್ಳು ವರದಿ ಪ್ರಕಟಿಸಿರುವ ಮಾಧ್ಯಮ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜೆಡಿಯು ಮಾಜಿ ಅಧ್ಯಕ್ಷ ರಾಜೀವ್ ರಾಜನ್ ಸಿಂಗ್ ಲಲನ್ (ಲಲನ್ ಸಿಂಗ್) ಅವರು ಶನಿವಾರ ಹೇಳಿದ್ದಾರೆ.
‘ಬಿಹಾರ ಉಪ ಮುಖ್ಯಮಂತ್ರಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಅನುಕೂಲ ಮಾಡಿಕೊಡಲು ಲಲನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಬಂಡಾಯವೇಳಲು ಸಂಚು ರೂಪಿಸುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಂಥ ಮಾಧ್ಯಮಗಳಿಗೆ ನಾನು ಕಾನೂನು ನೋಟಿಸ್ ನೀಡುತ್ತೇನೆ ಮತ್ತು ಅವುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಅವರು ಈ ಹೇಳಿಕೆ ನೀಡಿದ್ದಾರೆ.
‘ಒಂದು ಪ್ರಮುಖ ಸುದ್ದಿಪತ್ರಿಕೆ ಮತ್ತು ಕೆಲವು ವಾಹಿನಿಗಳು ಸುಳ್ಳು ಸುದ್ದಿ ಪ್ರಕಟಿಸಿವೆ. ಈ ವರದಿಗಳು ಹಾದಿ ತಪ್ಪಿಸುವಂತಿವೆ, ಸತ್ಯಕ್ಕೆ ದೂರವಾಗಿವೆ, ನನ್ನ ಹೆಸರು ಕೆಡಿಸುವ ಮತ್ತು ನನ್ನ ಮತ್ತು ನಿತೀಶ್ ನಡುವಣ 37 ವರ್ಷಗಳ ಸ್ನೇಹದ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡುವ ಉದ್ದೇಶ ಹೊಂದಿವೆ’ ಎಂದಿದ್ದಾರೆ.
ತಮ್ಮ ಕುರಿತು ಪತ್ರಿಕೆಗಳಲ್ಲಿ ಡಿಸೆಂಬರ್ 20ರಂದು ವರದಿ ಪ್ರಕಟವಾದ ಸಮಯದಲ್ಲಿ ತಾವು ಬಿಹಾರದ ಸಚಿವರೊಬ್ಬರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿದ್ದಾರೆ.
‘ಅದೇ ಅವಧಿಯಲ್ಲಿ ದೆಹಲಿಯಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೊತೆ ಪಾಲ್ಗೊಂಡಿದ್ದೆ. ಅದೇ ದಿನ ಸಂಜೆ ದೆಹಲಿಯ ಅವರ ನಿವಾಸದಲ್ಲಿ ನಡೆದ ಜೆಡಿಯು ಸಂಸದರ ಸಭೆಯಲ್ಲೂ ಭಾಗವಹಿಸಿದ್ದೆ’ ಎಂದು ಲಲನ್ ಸಿಂಗ್ ಹೇಳಿದ್ದಾರೆ.
ನನ್ನ ಲೋಕಸಭೆ ಕ್ಷೇತ್ರದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ. ಈ ಕಾರಣಕ್ಕಾಗಿ ನಾನು ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.