ನವದೆಹಲಿ: ಮಾಜಿ ಮುಖ್ಯಮಂತ್ರಿಯಾಗಿ ತಮಗೆ ಉತ್ತರಾಖಂಡ ಸರ್ಕಾರ ಹಂಚಿಕೆ ಮಾಡಿದ್ದ ಸರ್ಕಾರಿ ಬಂಗಲೆಗೆ ಮಾರುಕಟ್ಟೆ ದರದಲ್ಲಿ ಬಾಡಿಗೆ ಪಾವತಿ ಕುರಿತು ಅಲ್ಲಿನ ಹೈಕೋರ್ಟ್ ನೀಡಿರುವ ನೋಟಿಸ್ ಪ್ರಶ್ನಿಸಿ, ಸದ್ಯ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶಿಯಾರಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿರುವ ಅವರು, ಸದ್ಯ ತಾವು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದು, ಸಂವಿಧಾನದ ವಿಧಿ 361ರ ಅನ್ವಯ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿರುದ್ಧ ಇಂಥ ಕ್ರಮ ಜರುಗಿಸುವಂತಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ತಮ್ಮ ವಾದವನ್ನು ಆಲಿಸಿಲ್ಲ. ಯಾವುದೇ ಚಿಂತನೆಯಿಲ್ಲದೇ ಮಾರುಕಟ್ಟೆ ದರ ನಿಗದಿಪಡಿಸಿದ್ದು, ಡೆಹ್ರಾಡೂನ್ನಲ್ಲಿ ವಸತಿ ಉದ್ದೇಶಕ್ಕೆ ದುಬಾರಿ ಆದುದಾಗಿದೆ ಎಂದು ವಾದಿಸಿದ್ದಾರೆ.