ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾಳೇಶ್ವರ ದೇಗುಲದಲ್ಲಿ ಅಗ್ನಿ ಆಕಸ್ಮಿಕ: ರಂಗಪಂಚಮಿಗೆ ಹೊರಗಿನ ಬಣ್ಣಕ್ಕೆ ನಿಷೇಧ

Published 26 ಮಾರ್ಚ್ 2024, 15:21 IST
Last Updated 26 ಮಾರ್ಚ್ 2024, 15:21 IST
ಅಕ್ಷರ ಗಾತ್ರ

ಇಂದೋರ್: ಮಧ್ಯಪ್ರದೇಶದ ಉಜ್ಜಯಿನಿ ಮಾಹಾಕಾಳೇಶ್ವರ ದೇಗುಲದಲ್ಲಿ ಸಂಭವಿಸಿದ ಅಗ್ನಿ ದುರಂತದ ನಂತರ ಸುರಕ್ಷತೆಗೆ ಒತ್ತು ನೀಡಿರುವ ಅಲ್ಲಿನ ಆಡಳಿತ ಮಂಡಳಿಯು, ಬರಲಿರುವ ರಂಗಪಂಚಮಿ ದಿನದಂದು ಹೊರಗಿನಿಂದ ಬಣ್ಣ ತರುವುದಕ್ಕೆ ನಿಷೇಧ ಹೇರಿದೆ.

ದೇಗುಲದಲ್ಲಿ ಸೋಮವಾರ ಬೆಳಿಗ್ಗೆ ನಡೆಯುತ್ತಿದ್ದ ಭಸ್ಮ ಆರತಿ ಸಂದರ್ಭದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 14 ಜನ ಪುರೋಹಿತರು ಗಾಯಗೊಂಡಿದ್ದರು. 

‘ಈ ಬಾರಿ ರಂಗಪಂಚಮಿಯಲ್ಲಿ ಭಾಗವಹಿಸುವ ಭಕ್ತರು ಹೊರಗಿನಿಂದ ಬಣ್ಣ ತರುವಂತಿಲ್ಲ. ಮತ್ತುಗದ ಹೂವಿನಿಂದ ತಯಾರಿಸಲಾದ ನೈಸರ್ಗಿ ಬಣ್ಣವನ್ನು ದೇವಸ್ಥಾನವೇ ಭಕ್ತರಿಗೆ ನೀಡಲಿದೆ’ ಎಂದು ಜಿಲ್ಲಾಧಿಕಾರಿ ನೀರಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ರಂಗಪಂಚಮಿ ದಿನ ಬೆಳಿಗ್ಗೆ ನಡೆಯುವ ಭಸ್ಮ ಆರತಿ ಸಂದರ್ಭದಲ್ಲಿ ಸುರಕ್ಷತೆ ದೃಷ್ಟಿಯಿಂದ ಭಕ್ತರ ಸಂಖ್ಯೆಯನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ಶಿವ ಮತ್ತು ಕೃಷ್ಣ ದೇಗುಲಗಳು ಜಂಟಿಯಾಗಿ ಆಯೋಜಿಸಿರುವ ರಂಗಪಂಚಮಿಯಲ್ಲಿ ಈ ಮೊದಲು ರಾಸಾಯನಿಕ ಯುಕ್ತ ಗುಲಾಲ್ ಅನ್ನು ಬಳಸಲಾಗುತ್ತಿತ್ತು. ಆದರೆ ದೇಗಲದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೂ ಈ ರಾಸಾಯನಿಕ ಯುಕ್ತ ಬಣ್ಣಕ್ಕೂ ಸಂಬಂಧವಿದೆ ಎಂಬ ಸಂಶಯವನ್ನು ಕೇಂದ್ರ ಸಚಿವ ಕೈಲಾಶ್ ವಿಜಯವರ್ಗೀಯ ವ್ಯಕ್ತಪಡಿಸಿದ್ದಾರೆ. 

‘ಮಹಾಕಾಳೇಶ್ವರ ದೇಗುಲದಲ್ಲಿ ಪ್ರತಿ ಹೋಳಿ ಸಂದರ್ಭದಲ್ಲೂ ಗುಲಾಲ್ ಎರಚಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಗುಲಾಲ್‌ನಲ್ಲಿದ್ದ ಕೆಲ ರಾಸಾಯನಿಕದಿಂದ ಅಗ್ನಿ ಅವಘಡ ಸಂಭವಿಸಿದೆ. ಹೀಗಾಗಿ ಮುಂದಿನ ಬಾರಿಯಿಂದ ರಾಸಾಯನಿಕ ಬಳಸಿ ತಯಾರಿಸಿದ ಬಣ್ಣದ ಬಳಕೆ ಮಾಡುವುದಿಲ್ಲ. ಘಟನೆ ಕುರಿತು ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಅವಘಡಕ್ಕೆ ಮೈಕಾ ಅಥವಾ ಇತರ ರಾಸಾಯನಿಕ ಬಳಕೆಯಾಗಿರುವ ಸಾಧ್ಯತೆ ಇದೆ’ ಎಂದಿದ್ದಾರೆ.

‘ಈ ನಡುವೆ ಬೆಂಕಿ ಅವಘಡ ಸಂದರ್ಭದಲ್ಲಿ ಗಾಯಗೊಂಡವರಲ್ಲಿ 12 ಜನ ಇಂದೋರ್ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಪ್ರಥಮ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಳರೋಗಿಗಳಾಗಿ ದಾಖಲಾಗಿರುವವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಡಾ. ವಿನೋದ್ ಭಂಡಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT