ಕೋಲ್ಕತ್ತ: ಚಂಡಮಾರುತದಿಂದ ಆಗಿರುವ ಹಾನಿಗೆ ₹20 ಸಾವಿರ ಕೋಟಿ ಪರಿಹಾರ ನೀಡಬೇಕು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೇಡಿಕೆ ವಸ್ತುಸ್ಥಿತಿಯ ಅರಿವಿಲ್ಲದೇ ಮಾಡಿರುವುದು ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ತಾವು ಮುಂದಿಟ್ಟಿರುವ ಬೇಡಿಕೆಗೆ ವಿವರವಾದ ವರದಿ ಒಪ್ಪಿಸುವುದನ್ನು ತಪ್ಪಿಸುವ ಸಲುವಾಗಿಯೇ ಮಮತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರಾಮರ್ಶೆ ಸಭೆಗೆ ಗೈರಾಗಿದ್ದಾರೆ ಎಂದೂ ಘೋಷ್ ಹೇಳಿದ್ದಾರೆ.
‘ಒಡಿಶಾದವರೂ ಚಂಡಮಾರುತದ ತೀವ್ರತೆಯನ್ನು ಎದುರಿಸಬೇಕಾಗಿ ಬಂದಿತ್ತು. ಬಂಗಾಳದಲ್ಲಿ ಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಅವರು ₹20 ಸಾವಿರ ಕೋಟಿ ಪರಿಹಾರ ಕೇಳಿದ್ದಾರೆ. ತಮ್ಮ ಅವಾಸ್ತವಿಕ ಬೇಡಿಕೆಯ ಬಗ್ಗೆ ವಿವರಣೆ ನೀಡಲು ಸಾಧ್ಯವಾಗದ ಮಮತಾ ಪ್ರಧಾನಿಯವರ ಸಭೆಗೆ ಗೈರಾಗಿದ್ದಾರೆ’ ಎಂದು ಘೋಷ್ ಹೇಳಿದ್ದಾರೆ.
ಪ್ರಧಾನಿಯವರಿಗೆ ಎರಡು ಪ್ರಸ್ತಾವಗಳನ್ನು ಸಲ್ಲಿಸಲಾಗಿದ್ದು, ಚಂಡಮಾರುತದಿಂದ ಹಾನಿಗೊಳಗಾಗಿರುವ ದಿಘಾ ಮತ್ತು ಸುಂದರ್ಬನ್ಸ್ ಪ್ರವಾಸಿ ತಾಣಗಳನ್ನು ಮರುರೂಪಿಸಲು ತಲಾ ₹10 ಸಾವಿರ ಕೋಟಿಯಂತೆ ಪರಿಹಾರ ಕೋರಲಾಗಿದೆ ಎಂದು ಮಮತಾ ಅವರು ಶುಕ್ರವಾರ ತಿಳಿಸಿದ್ದರು.