ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುಬೈನಲ್ಲಿ ಹುಟ್ಟುಹಬ್ಬ ಆಚರಿಸಲಿಲ್ಲ ಎಂದು ಪತಿಯನ್ನೇ ಹೊಡೆದು ಕೊಂದ ಪತ್ನಿ!

Published 25 ನವೆಂಬರ್ 2023, 8:02 IST
Last Updated 25 ನವೆಂಬರ್ 2023, 8:02 IST
ಅಕ್ಷರ ಗಾತ್ರ

ಪುಣೆ: ಹುಟ್ಟುಹಬ್ಬ ಆಚರಿಸಿಕೊಳ್ಳಲು ದುಬೈಗೆ ಕರೆದುಕೊಂಡು ಹೋಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಮಹಿಳೆಯೊಬ್ಬಳು ತನ್ನ ಪತಿಯ ಮೂಗಿಗೆ ಬಲವಾಗಿ ಹೊಡೆದಿದ್ದು, ಸ್ಥಳದಲ್ಲೇ ಪತಿ ಮೃತಪಟ್ಟ ಘಟನೆ ಪುಣೆಯ ವನವಾಡಿ ಎಂಬಲ್ಲಿ ನಡೆದಿದೆ.

ರಿಯಲ್‌ ಎಸ್ಟೇಟ್ ಡೆವಲಪರ್‌ ಆಗಿ ಕೆಲಸ ಮಾಡುತ್ತಿದ್ದ ನಿಖಿಲ್‌ ಖನ್ನಾ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಆರೋಪಿ ಪತ್ನಿ ರೇಣುಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸೆಪ್ಟೆಂಬರ್ 18ರಂದು ರೇಣುಕಾ ಅವರ ಹುಟ್ಟುಹಬ್ಬವಿದ್ದು, ನವೆಂಬರ್ 5ರಂದು ಮದುವೆ ವಾರ್ಷಿಕೋತ್ಸವವೂ ಇತ್ತು. ಈ ಎರಡು ವಿಶೇಷ ದಿನಗಳನ್ನು ದುಬೈನಲ್ಲಿ ಆಚರಿಸಿಕೊಳ್ಳಬೇಕೆಂದು ರೇಣುಕಾ ಬಯಸಿದ್ದರು. ಇದನ್ನು ಪತಿಯ ಮುಂದೆ ಹೇಳಿದ್ದರು. ಆದರೆ ನಿಖಿಲ್‌ ಇದಕ್ಕೆ ಒಪ್ಪಿರಲಿಲ್ಲ’ ಎಂದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ.

ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ದೆಹಲಿಗೆ ಕರೆದುಕೊಂಡು ಹೋಗುವಂತೆಯೂ ರೇಣುಕಾ ಒತ್ತಾಯಿಸಿದ್ದರು. ಇದಕ್ಕೂ ನಿಖಿಲ್‌ ಒಲ್ಲೆ ಎಂದಿದ್ದರು. ಇವೆಲ್ಲದರಿಂದ ರೇಣುಕಾ ಪತಿ ವಿರುದ್ಧ ಅಸಮಾಧಾನಗೊಂಡಿದ್ದರು.

ಇದೇ ವಿಚಾರವಾಗಿ ಶುಕ್ರವಾರ ದಂಪತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಕೋಪದಲ್ಲಿ ರೇಣುಕಾ ಪತಿಯ ಮೂಗಿಗೆ ಬಲವಾಗಿ ಹೊಡೆದಿದ್ದರು. ಇದು ತೀವ್ರ ರಕ್ತಸ್ರಾವಕ್ಕೆ ಕಾರಣವಾಗಿತ್ತು. ನೆರೆಹೊರೆಯವರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದದ್ದ ನಿಖಿಲ್‌ ಅವರನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೂ ಮುನ್ನವೇ ನಿಖಿಲ್‌ ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರೇಣುಕಾ ವಿರುದ್ಧ ಐಪಿಸಿ ಸೆಕ್ಷನ್‌ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT