ನವದೆಹಲಿ: ನಕಾರಾತ್ಮಕ ಸುದ್ದಿ, ವಿಚಾರಗಳನ್ನು ಕಾಳ್ಗಿಚ್ಚಿನಂತೆ ಹರಡಬಹುದು. ಅದು ಬಹಳ ಸುಲಭ. ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹರಡಲು ಎಲ್ಲರೂ ಒಟ್ಟಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.
ಭಾನುವಾರ ಬಿತ್ತರಗೊಂಡ ಈ ವರ್ಷದ ಕೊನೆಯ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದ 51ನೇ ಧ್ವನಿಮುದ್ರಿತ ಆವೃತ್ತಿಯಲ್ಲಿ ಅವರು ಈ ಸಲಹೆ ನೀಡಿದ್ದಾರೆ.
‘ಸಕಾರಾತ್ಮಕ ಚಿಂತನೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಹಲವಾರು ವೆಬ್ಸೈಟ್ಗಳು ಸಕಾರಾತ್ಮಕ ಸುದ್ದಿಗಳನ್ನು ಹರಡುತ್ತಿವೆ. ಅವುಗಳನ್ನು ಹಂಚಿಕೊಳ್ಳುವ ಮೂಲಕ ಸಕಾರಾತ್ಮಕ ವಿಚಾರಗಳನ್ನು ಬಿತ್ತೋಣ’ ಎಂದು ಕರೆ ನೀಡಿದರು. ‘ಭಾರತ 2018ರಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. 2019ರಲ್ಲಿಯೂ ಭಾರತದ ಅಭಿವೃದ್ಧಿ ಪಯಣ ಮುಂದುವರಿಯಲಿದೆ’ ಎಂದರು.
ದ.ಆಫ್ರಿಕಾ ಅಧ್ಯಕ್ಷ ಗಣರಾಜ್ಯೋತ್ಸವ ಅತಿಥಿ: 2019ರ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಆಗಮಿಸು ವರು ಎಂದು ಪ್ರಧಾನಿ ತಿಳಿಸಿದ್ದಾರೆ.
ಸರ್ದಾರ್ ಪಟೇಲ್ ಪ್ರಶಸ್ತಿ:ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಕೊಡುಗೆ ನೀಡಿದವರಿಗೆ ಸರ್ದಾರ್ ಪಟೇಲ್ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಭಾರತೀಯ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರ ಸದಸ್ಯದಲ್ಲೇ ‘ಎಲ್ಲರಿಗೂ ಆಹಾರದ ಹಕ್ಕು’ ಎಂಬ ಆಂದೋಲನ ಆರಂಭಿಸಲಿದೆ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಬೃಹತ್ ಏಕತಾ ಮೂರ್ತಿ, ಆಜಾದ್ ಹಿಂದ್ ಸರ್ಕಾರದ 75ನೇ ವಾರ್ಷಿಕೋತ್ಸವದ ಅಂಗವಾಗಿ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜಾರೋಹಣ, ವಿಶ್ವಸಂಸ್ಥೆ ನೀಡಿದ ‘ಚಾಂಪಿಯನ್ಸ್ ಆಫ್ ಅರ್ತ್’ ಪ್ರಶಸ್ತಿ ಸೇರಿದಂತೆ ಈ ವರ್ಷದ ಸಾಧನೆಗಳನ್ನು ಮೆಲುಕು ಹಾಕಿದರು.
ಭಾಷಣದ ಪ್ರಮುಖ ಅಂಶಗಳು
l ಭಾರತಕ್ಕೆ ಇಡೀ ಜಗತ್ತಿನಲ್ಲಿ ಹೆಮ್ಮೆಯ ಮತ್ತು ವೈಭವದ ಸ್ಥಾನ
l ಈ ವರ್ಷ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ
l ಬಡತನ ನಿವಾರಣೆಗೆ ದಾಖಲೆ ವೇಗದಲ್ಲಿ ಕೆಲಸ
l ಸ್ವಚ್ಛತಾ ಭಾರತ್ ಯೋಜನೆಯಡಿ ಶೇ 95 ರಷ್ಟು ಪ್ರಗತಿ
l ಹವಾಮಾನ ವೈಪರೀತ್ಯ ಮತ್ತು ಸೌರ ಇಂಧನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದ ಭಾರತದ ಸಾಧನೆ