ಲಖನೌ: ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸಂಸ್ಥಾಪಕ ಕಾನ್ಶಿರಾಮ್ ಅವರಿಗೆ ಭಾರತ ರತ್ನ ನೀಡುವಂತೆ ಬಿಎಸ್ಪಿ ನಾಯಕಿ ಮಾಯಾವತಿ ಒತ್ತಾಯಿಸಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ(ಮರಣೋತ್ತರ) ಪ್ರಶಸ್ತಿ ನೀಡಿ ಗೌರವಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಅವರು ಕಾನ್ಶಿರಾಮ್ ಅವರಿಗೂ ಈ ಗೌರವ ಸಲ್ಲಬೇಕಿದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ದೇಶದ ಅತ್ಯಂತ ಹಿಂದುಳಿದ ವರ್ಗಗಳ ಸಾಂವಿಧಾನಿಕ ಹಕ್ಕು, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ ಮಹಾನ್ ನಾಯಕ ಕರ್ಪೂರಿ ಅವರಿಗೆ ಅವರ ಜನ್ಮ ಶತಮಾನೋತ್ಸವ ದಿನವಾದ ಇಂದು ಗೌರವವನ್ನು ಸಲ್ಲಿಸುತ್ತೇನೆ’ ಎಂದರು.
‘ದಲಿತರು ಮತ್ತು ಇತರ ನಿರ್ಲಕ್ಷಿತ ಜನರು ಸ್ವಾಭಿಮಾನದಿಂದ ಬದುಕಲು ಸಹಾಯ ಮಾಡುವ ಮೂಲಕ ಅವರ ಸಬಲೀಕರಣಕ್ಕೆ ದುಡಿದ ಕಾನ್ಶಿರಾಮ್ ಅವರ ಕೊಡುಗೆ ಅವಿಸ್ಮರಣೀಯ. ಅವರಿಗೂ ಭಾರತ ರತ್ನ ನೀಡಿ ಗೌರವಿಸಬೇಕೆಂಬುವುದು ಕೋಟ್ಯಂತರ ಜನರ ಆಶಯವಾಗಿದೆ’ ಎಂದು ಹೇಳಿದರು.