ಬಲಿಯಾ: ‘ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಗವಾನ್ ‘ರಾಮ’ನನ್ನು ನೆನಪಿಸಿಕೊಳ್ಳುತ್ತಾರೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋವಿಂದ ಚೌಧರಿ ಹೇಳಿದ್ದಾರೆ.
ವರದಿಗಾರರ ಜತೆ ಮಾತನಾಡಿದ ಅವರು, ‘ಆರ್ಎಸ್ಎಸ್ ಮುಖ್ಯಸ್ಥರು ಮತ್ತೊಮ್ಮೆ ರಾಮನನ್ನು ನೆನಪಿಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಏಕೆ ರಾಮ ಮಂದಿರ ವಿಷಯ ಮುನ್ನೆಲೆಗೆ ತರುತ್ತಾರೆ? ಕಳೆದ ಎರಡು ವರ್ಷ ಏಕೆ ಮೌನವಾಗಿದ್ದರು’ ಎಂದು ಚೌಧರಿ ಪ್ರಶ್ನಿಸಿದರು.
‘ಭಗವಾನ್ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುತ್ತದೆ. ಇದು ನಂಬಿಕೆಯ ಸಂಕೇತ. ರಾಮನೇ ಬಿಜೆಪಿಯನ್ನು ನಾಶ ಮಾಡಲಿದ್ದಾನೆ. ಆಡಳಿತದ ಎಲ್ಲ ರಂಗಗಳಲ್ಲೂ ಬಿಜೆಪಿ ವಿಫಲವಾಗಿರುವುದು ಸಾಬೀತಾಗಿದೆ. ಮತ ಪಡೆಯುವ ವೇಳೆ ನೀಡಿದ್ದ ಯಾವ ಭರವಸೆಗಳನ್ನೂ ಸರ್ಕಾರ ಪೂರೈಸಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದ ಬಿಜೆಪಿ ಜನಪ್ರಿಯತೆ ಕಡಿಮೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತ್ತು ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮತ್ತು ಅದರ ಮಿತ್ರ ಸಂಘಟನೆಗಳು ರಾಮ ಮಂದಿರ ವಿವಾದವನ್ನು ಮುನ್ನೆಲೆಗೆ ತರುತ್ತಿವೆ ಎಂದು ಅವರು ದೂರಿದ್ದಾರೆ.