ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಲ್ಯಾಂಡ್ ಆಗುತ್ತಿದ್ದ ಲಘು ವಿಮಾನವೊಂದು ರನ್ವೇನಲ್ಲಿ ಹಾದಿ ತಪ್ಪಿ ಅಪಘಾತಕ್ಕೀಡಾಗಿದೆ.
ಅಪಘಾತಕ್ಕೀಡಾದ ಖಾಸಗಿ ಜೆಟ್ VT-DBL ವಿಮಾನವು ವಿಶಾಖಪಟ್ಟಣಂನಿಂದ ಬಂದಿತ್ತು. ಇದರಲ್ಲಿ 6 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿಯಿದ್ದರು. ಈ ಪೈಕಿ ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ವಿಮಾನ ನಿಲ್ದಾಣದಲ್ಲಿ ತುರ್ತು ಕಾರ್ಯಾಚರಣೆ ಆರಂಭಿಸಲಾಗಿದೆ. ಇದರಿಂದಾಗಿ ಇತರ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮುಂಬೈ ಅಗ್ನಿಶಾಮಕ ದಳ ಮತ್ತು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಖಾಸಗಿ ಜೆಟ್ ವಿಮಾನ VT-DBL ಲ್ಯಾಂಡಿಂಗ್ ವೇಳೆ ರನ್ವೇನಿಂದ ಹೊರಕ್ಕೆ ಜಾರಿದ ಪರಿಣಾಮ ಅಪಘಾತವಾಗಿದೆ ಎಂದು ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.
ಬಿರುಗಾಳಿ ಸಹಿತ ಮಳೆಯಿಂದಾಗಿ ರನ್ವೇ ಸ್ಪಷ್ಟವಾಗಿ ಕಾಣಿಸದ ಪರಿಣಾಮ ದುರಂತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.