ಮುಂಬೈ: ಇಲ್ಲಿಯ ಘಾಟ್ಕೋಪರ್ನಲ್ಲಿ ಮೇ 13ರಂದು ಬೃಹತ್ ಜಾಹೀರಾತು ಫಲಕ ಉರುಳಿಬಿದ್ದು 17 ಜನರ ಸಾವಿಗೆ ಕಾರಣವಾದ ಪ್ರಕರಣದ ಸಂಬಂಧ ಎಂಜಿನಿಯರ್ ಮನೋಜ್ ಸಂಘು ಅವರನ್ನು ನ್ಯಾಯಾಲಯವು ಜೂನ್ 5ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಈ ಪ್ರಕರಣ ಸಂಬಂಧ ಗುರುವಾರ ಅಪರಾಧ ಘಟಕದಿಂದ ಬಂಧಿಸಲಾದ ಸಂಘು ಅವರನ್ನು ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಈ ಮೂಲಕ ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನವಾದಂತಾಗಿದೆ. ಇದಕ್ಕೂ ಮುಂಚೆ ಇಗೊ ಮಾಧ್ಯಮ ಪ್ರೈ.ಲಿ. ನಿರ್ದೇಶಕ ಭವೇಶ್ ಭಿಂಡೆ ಅವರ ಬಂಧನವಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮೇ 13ರಂದು ಬೀಸಿದ ಬಿರುಗಾಳಿ ಮತ್ತು ಮಳೆಯಿಂದಾಗಿ ಪೆಟ್ರೋಲ್ ಪಂಪ್ ಮೇಲೆ ಅಪ್ಪಿಳಿಸಿದ್ದ ಜಾಹೀರಾತು ಫಲಕಕ್ಕೆ ಸಂಘು ದೃಢತೆಯ ಪ್ರಮಾಣಪತ್ರ ನೀಡಿದ್ದರು.