ನೆಲ್ಲೂರು(ಆಂಧ್ರಪ್ರದೇಶ): ಆಂಧ್ರ ಪ್ರದೇಶದಲ್ಲಿ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ನೇತೃತ್ವದ ಸರ್ಕಾರ ರಚನೆಯಾದರೆ ಮುಸ್ಲಿಮರು ಮೆಕ್ಕಾಗೆ ಯಾತ್ರೆ ಕೈಗೊಳ್ಳಲು ₹1 ಲಕ್ಷ ಹಣಕಾಸಿನ ನೆರವು ನೀಡಲಾಗುವುದು ಎಂದು ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ನೆಲ್ಲೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರ ಜೊತೆಗಿನ ಸಂವಾದದ ವೇಳೆ ನಾಯ್ಡು ಈ ಭರವಸೆ ನೀಡಿದ್ದಾರೆ.
‘ರಾಜ್ಯದಲ್ಲಿ ಎನ್ಡಿಎ ಮೈತ್ರಿಯು ಅಧಿಕಾರಕ್ಕೆ ಬಂದ ಕೂಡಲೇ ಪ್ರತಿಯೊಬ್ಬ ಮುಸ್ಲಿಂ ಮೆಕ್ಕಾಗೆ ಹಜ್ ಯಾತ್ರೆ ಕೈಗೊಳ್ಳಲು ತಲಾ ₹1 ಲಕ್ಷ ಹಣಕಾಸಿನ ನೆರವು ನೀಡಲಾಗುವುದು. ಮುಸ್ಲಿಮರ ರೊಟಿಯಯಾನ್ ಕಿ ಈದ್ ಅನ್ನು ನಾಡಿನ ಹಬ್ಬವೆಂದು ಘೋಷಿಸಲಾಗುವುದು, ಬೇರೆ ಸ್ಥಳಗಳಿಗೆ ಹೋಲಿಸಿದರೆ ಹೈದರಾಬಾದ್ ಮುಸ್ಲಿಮರು ಬಹಳ ಮುಂದಿದ್ದಾರೆ’ ಎಂದು ನಾಯ್ಡು ಹೇಳಿದ್ದಾರೆ.
ಈ ಹಿಂದೆ, ಕೇಂದ್ರದಲ್ಲಿ ಎನ್ಡಿಎ ಸರ್ಕಾರದ ಭಾಗವಾಗಿದ್ದ ಟಿಡಿಪಿ, ಮುಸ್ಲಿಮರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಂಡಿತ್ತು ಎಂದು ಹೇಳಿದ್ದಾರೆ.
ಟಿಡಿಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಹೈದರಾಬಾದ್ನಲ್ಲಿ ಉರ್ದು ವಿಶ್ವವಿದ್ಯಾಲಯ ಮತ್ತು ಹಜ್ ಭವನ ನಿರ್ಮಾಣ ಮಾಡಿದೆ. ಕಳೆದ 5 ವರ್ಷಗಳಲ್ಲಿ ಸಿಎಂ ಜಗನ್ ಒಂದು ಮಸೀದಿಯನ್ನೂ ಕಟ್ಟುವ ಪ್ರಯತ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಎನ್ಆರ್ಸಿಗೆ ವೈಎಸ್ಆರ್ಸಿಪಿ ಬೆಂಬಲ ಸೂಚಿಸಿದೆ ಎಂದು ಟೀಕಿಸಿದ್ದಾರೆ.
175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಆಂಧ್ರಪ್ರದೇಶದಲ್ಲಿ ಮೇ 13ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಹೊರಬೀಳಲಿದೆ.