ನವದೆಹಲಿ: ‘ಪರಿಸ್ಥಿತಿ ಆಧಾರದ ಮೇಲೆ ಸಂಸತ್ತಿನ ಮುಂದಿನ ಅಧಿವೇಶನದ ಅವಧಿ ನಿರ್ಧಾರವಾಗಲಿದೆ’ ಎಂದು ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ಹೇಳಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ದೇಶದಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಎಂದಿನಂತೆ ಸಂಸತ್ ಅಧಿವೇಶನ ನಡೆಯುತ್ತದೆ ಎಂದು ನಿರೀಕ್ಷಿಸಬಹುದು ಎಂದು ನಾಯ್ಡು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಈ ಪಿಡುಗಿನ ಸಂದರ್ಭದಲ್ಲಿಯೂ ರಾಜ್ಯಸಭೆ ಸದಸ್ಯರೊಂದಿಗೆ ಸಂವಹನ ನಡೆಸುವ ಸಲುವಾಗಿ ನಾಯ್ಡು ಅವರು ‘ಮಿಷನ್ ಕನೆಕ್ಟ್’ ನಡೆಸುತ್ತಿದ್ದು, ರಾಜ್ಯಸಭೆಯ 245 ಸದಸ್ಯರಲ್ಲಿ 241 ಜನರ ಜತೆ ಮಾತನಾಡಿದ್ದಾರೆ. ಈ ವೇಳೆ ರಾಜ್ಯಸಭೆಯ ಕೆಲವು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಹೇಳಿಕೆ ನೀಡಿದ್ದಾರೆ.