ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟ ಮಂಜು: ಸುಗಮ ಸಂಚಾರಕ್ಕೆ ಕ್ರಮ, ಹೆದ್ದಾರಿ ಪ್ರಾಧಿಕಾರದಿಂದ ಮಾರ್ಗಸೂಚಿ ಪ್ರಕಟ

Published 30 ಡಿಸೆಂಬರ್ 2023, 15:56 IST
Last Updated 30 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ನವದೆಹಲಿ: ಚಳಿಗಾಲದ ವೇಳೆ ದಟ್ಟ ಮಂಜು ಆವರಿಸುವುದರಿಂದ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ಚಾಲಕರು ತೊಂದರೆಗೆ ಸಿಲುಕುತ್ತಾರೆ. ಹಾಗಾಗಿ, ಇಂತಹ ತುರ್ತು ಸಂದರ್ಭಗಳಲ್ಲಿ ಸುಗಮ ಸಂಚಾರ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಮಾರ್ಗಸೂಚಿ ಪ್ರಕಟಿಸಿದೆ. 

ಮಂಜು ಆವೃತವಾದ ವೇಳೆ ಎದುರಾಗುವ ಸಮಸ್ಯೆಗಳನ್ನು ತಾಂತ್ರಿಕ ಹಾಗೂ ಸಂಚಾರ ಸುರಕ್ಷತಾ ವಿಧಾನದಡಿ ಬಗೆಹರಿಸಲು ಕ್ರಮಕೈಗೊಳ್ಳುವುದಾಗಿ ಪ್ರಾಧಿಕಾರ ತಿಳಿಸಿದೆ.

ಹೆದ್ದಾರಿಗಳಲ್ಲಿ ಮಿನುಗುದೀಪ ಅಳವಡಿಕೆ ಮೂಲಕ ಬಳಕೆದಾರರಲ್ಲಿ ಸಂಚಾರ ನಿಯಮಗಳ ಪಾಲನೆಗೆ ಜಾಗೃತಿ ಮೂಡಿಸುವುದಾಗಿ ಹೇಳಿದೆ.

ವಾಹನಗಳ ಸಂಚಾರಕ್ಕೆ ಹೆದ್ದಾರಿಯ ವಾತಾವರಣವು ಅನುಕೂಲಕರವಾಗಿದೆಯೇ ಎಂಬ ಬಗ್ಗೆ ಪ್ರತಿ ವಾರವೂ ರಾತ್ರಿವೇಳೆ ತಪಾಸಣೆ ನಡೆಸಬೇಕು. ಇದಕ್ಕಾಗಿ ಪ್ರಾಧಿಕಾರದ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರನ್ನು ಒಳಗೊಂಡ ತಂಡ ರಚಿಸಬೇಕು ಎಂದು ಸೂಚಿಸಿದೆ.

ಸುರಕ್ಷತಾ ಕ್ರಮ ಕೈಗೊಳ್ಳಬೇಕಿರುವ ಸ್ಥಳಗಳನ್ನು ಗುರುತಿಸುವುದು ಈ ತಂಡದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕ್ರಮಕೈಗೊಳ್ಳುವಂತೆ ಪ್ರಾಧಿಕಾರದ ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅಲ್ಲದೇ, ಮಂಜು ಆವೃತವಾಗಿರುವ ಸ್ಥಳಗಳ ಸಮೀಪದಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸುವಂತೆಯೂ ನಿರ್ದೇಶನ ನೀಡಿದೆ. 

ಅಪಘಾತ ಸಂಭವಿಸಿದ ವೇಳೆ ವಾಹನಗಳ ಸಂಚಾರ ವ್ಯತ್ಯಯವಾಗದಂತೆ ಜಾಗ್ರತೆವಹಿಸಬೇಕು. ಹೆದ್ದಾರಿ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡವು ರಸ್ತೆ ಸಂಚಾರ ಪರಿಕರಗಳನ್ನು ಬಳಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಸ್ಥಳೀಯ ಪೊಲೀಸರು, ತುರ್ತುಸೇವಾ ವಿಭಾಗ ಹಾಗೂ ಸ್ಥಳೀಯ ಆಡಳಿತದ ನೆರವಿನೊಂದಿಗೆ ಇದನ್ನು ಕಾರ್ಯಗತಗೊಳಿಸಬೇಕು ಎಂದು ಸೂಚಿಸಿದೆ.

ಸಂಚಾರ ಸೂಚನಾ ಫಲಕ, ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕ ಹಾಗೂ ಕಾಮಗಾರಿ ನಿರ್ಮಾಣ ಹಂತದ ಸ್ಥಳಗಳಲ್ಲಿ ಮಿನುಗುದೀಪ ಅಳವಡಿಕೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ.

ಹೆದ್ದಾರಿಯಲ್ಲಿ ಮಂಜು ಆವರಿಸಿರುವ ಸ್ಥಳಗಳ ಬಗ್ಗೆ ಎಲೆಕ್ಟ್ರಾನಿಕ್‌ ಫಲಕಗಳಲ್ಲಿ ಪ್ರಕಟಿಸಿ ಚಾಲಕರಿಗೆ ಮಾಹಿತಿ ನೀಡಬೇಕು. ವೇಗಮಿತಿ ಕಾಯ್ದುಕೊಳ್ಳುವ ಬಗ್ಗೆಯೂ ಸೂಚಿಸಬೇಕು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT