ನವದೆಹಲಿ: ಅಫ್ಗಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆ ದೇಶದ ಜನರ ಮೇಲೆ ಅಷ್ಟೇ ಅಲ್ಲದೇ ನೆರೆಹೊರೆಯ ರಾಷ್ಟ್ರಗಳು ಮತ್ತು ವಲಯಗಳ ಮೇಲೂ ಪರಿಣಾಮವನ್ನು ಉಂಟು ಮಾಡುತ್ತಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್ ಹೇಳಿದ್ದಾರೆ.
ಅಫ್ಗನ್ ಬಿಕ್ಕಟ್ಟು ಕುರಿತು ಬುಧವಾರ ಇಲ್ಲಿ ಆಯೋಜಿಸಿದ್ದ ಎಂಟು ರಾಷ್ಟ್ರಗಳ 'ಪ್ರಾದೇಶಿಕ ಭದ್ರತಾ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ’ಅಫ್ಗಾನ್ ಪರಿಸ್ಥಿತಿಯ ಕುರಿತು ಪ್ರಾದೇಶಿಕ ರಾಷ್ಟ್ರಗಳ ನಡುವೆ ನಿಕಟ ಸಮಾಲೋಚನೆ, ಹೆಚ್ಚಿನ ಸಹಕಾರ ಮತ್ತು ಸಮನ್ವಯ ಹೊಂದಲು ಇದು ಸೂಕ್ತ ಸಮಯ’ ಎಂದು ಹೇಳಿದರು.
ಈ ಸಂವಾದದಲ್ಲಿರಷ್ಯಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ನ ಭದ್ರತಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.
ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಹೆಚ್ಚುತ್ತಿರುವ ಭಯೋತ್ಪಾದನೆ, ತೀವ್ರವಾದ ಮತ್ತು ಮಾದಕ ವಸ್ತು ಕಳ್ಳಸಾಗಣೆಯಂತಹ ಬೆದರಿಕೆಗಳನ್ನು ಎದುರಿಸಲು ನೆರೆಯ ರಾಷ್ಟ್ರಗಳ ನಡುವೆ ಸಹಕಾರ ಏರ್ಪಡಿಸಬೇಕೆಂಬ ಉದ್ದೇಶದೊಂದಿಗೆ ಭಾರತ ಈ ಸಂವಾದವನ್ನು ಆಯೋಜಿಸಿತ್ತು.