ಬಲಿಯಾ:ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆ ರವಾನಿಸಿರುವ ಸುಹಲ್ದೇವ್ ಭಾರತೀಯ ಸಮಾಜ ಪಕ್ಷವು (ಎಸ್ಬಿಎಸ್ಪಿ),ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್ಪಿ–ಬಿಎಸ್ಪಿ ಮೈತ್ರಿಕೂಟದ ಜೊತೆ ಹೋಗುವ ಆಯ್ಕೆ ಮುಕ್ತವಾಗಿದೆ ಎಂದಿದೆ.
ಈ ಮೊದಲು ಎನ್ಡಿಎನಿಂದ ಹೊರನಡೆಯುವ ಬೆದರಿಕೆ ಹಾಕಿದ್ದ ಎಸ್ಬಿಎಸ್ಪಿ ಅಧ್ಯಕ್ಷ ಹಾಗೂ ಸಂಪುಟದ ಹಿರಿಯ ಸಚಿವ ಓಂಪ್ರಕಾಶ್ ರಾಜ್ಭರ್ ಅವರು ಬಿಜೆಪಿ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆಗಳ ಸಚಿವರಾಗಿರುವ ರಾಜ್ಭರ್ ಅವರು ಎಸ್ಪಿ ಅಥವಾ ಬಿಎಸ್ಪಿ ಜೊತೆ ಈ ಸಂಬಂಧ ಈತನಕ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಮತಾ ಪರ ನಿಂತ ರಾಜ್ಭರ್:
ಕೋಲ್ಕತ್ತದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಬಿಐ ನಡೆಯನ್ನು ಟೀಕಿಸಿದ್ದಾರೆ. ‘ಬಿಜೆಪಿಗೆ ಸೇರ್ಪಡೆಯಾಗಿರುವ ಶಾರದಾ ಹಗರಣದ ಮುಖ್ಯ ಆರೋಪಿ ಮನೆ ಮೇಲೆ ಸಿಬಿಐ ಏಕೆ ದಾಳಿ ನಡೆಸಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.