ನವದೆಹಲಿ: 2020ರ ಗಲಭೆಯಿಂದ ತತ್ತರಿಸಿರುವ ಈಶಾನ್ಯ ದೆಹಲಿಯಲ್ಲಿ ಅನುಮತಿ ಪಡೆಯದೆ ಸಭೆ ನಡೆಸಿದ ಕಾರಣ ಹಿಂದೂ ರಾಷ್ಟ್ರ ಪಂಚಾಯತ್ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ನಡೆದ ಸಭೆಯಲ್ಲಿ, ಈಶಾನ್ಯ ದೆಹಲಿಯನ್ನು ದೇಶದ ಮೊದಲ ಹಿಂದೂ ರಾಷ್ಟ್ರ ಜಿಲ್ಲೆಯನ್ನಾಗಿ ಮಾಡಲು ಕರೆ ನೀಡಿ, ಅಲ್ಪಸಂಖ್ಯಾತರಿಗೆ ತಮ್ಮ ಆಸ್ತಿಗಳನ್ನು ಮಾರಾಟ ಮಾಡದಂತೆ ಅಥವಾ ಬಾಡಿಗೆಗೆ ನೀಡದಂತೆ ಇಲ್ಲಿರುವ ಸ್ಥಳೀಯರಿಗೆ ಮನವಿ ಮಾಡಲಾಗಿತ್ತು.
ಸಭೆ ನಡೆಸಲು ಅನುಮತಿ ಪಡೆಯದ ಕಾರಣ ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಮತ್ತು ಹಿಂದೂ ಯುನೈಟೆಡ್ ಫ್ರಂಟ್ ಮುಖ್ಯಸ್ಥ ಜೈ ಭಗವಾನ್ ಗೋಯಲ್ ಆಯೋಜಿಸಿದ್ದ ಸಭೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಸತ್ಯನಾರಾಯಣ್ ಜತಿಯಾ ಮತ್ತು ಉತ್ತರ ದೆಹಲಿಯ ಮಾಜಿ ಮೇಯರ್ ಅವತಾರ್ ಸಿಂಗ್ ಇತರರು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಪಕ್ಷದ ಅನುಮೋದನೆ ಇಲ್ಲ ಮತ್ತು ಗೋಯಲ್ ಅವರು ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿಲ್ಲ ಎಂದು ದೆಹಲಿ ಬಿಜೆಪಿ ವಕ್ತಾರರು ತಿಳಿಸಿದ್ದಾರೆ.